ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ. ಇದನ್ನು ಖಂಡಿಸಿ ಭಾರತದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಿನಿ ಹರಾಜಿನಲ್ಲಿ ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು 9.2 ಕೋಟಿ ನೀಡಿ ಖರೀದಿಸಿತ್ತು. ಇವರನ್ನು ಕೈ ಬಿಡುವಂತೆಯೂ ಸಹ ಬಿಸಿಸಿಐ ಸೂಚನೆಯನ್ನು ನೀಡಿದೆ. ಅಲ್ಲದೆ ಮುಸ್ತಾಫಿಜುರ್ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಹ ಅನುಮತಿ ನೀಡಲಾಗಿದೆ.
ತಮ್ಮ ದೇಶದ ಆಟಗಾರರಿಗೆ ಐಪಿಎಲ್ನಲ್ಲಿ ಆಡಲು ನಿರಾಕರಿಸಿದ್ದು ಹಾಗೂ ರಾಜಕೀಯ ಬಿಕ್ಕಟ್ಟಿನಿಂದಾಗಿ ಬಾಂಗ್ಲಾದೇಶ ಟಿ20 ವಿಶ್ವಕಪ್ನಲ್ಲಿ ಭಾರತ ಪ್ರವಾಸವನ್ನು ಬೆಳೆಸುವುದಿಲ್ಲ ಎಂದು ತಿಳಿಸಿದೆ. ಬಾಂಗ್ಲಾ ಲೀಗ್ ಹಂತದ ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ಆಡಬೇಕಿತ್ತು. ಆದರೆ ಈಗ ಈ ಪಂದ್ಯಗಳು ಶ್ರೀಲಂಕಾಕ್ಕೆ ಶಿಫ್ಟ್ ಆಗುವ ಸಾಧ್ಯತೆ ಕಾಣುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ ಬಾಂಗ್ಲಾದೇಶ ಟಿ20 ವಿಶ್ವಕಪ್ 2026ಗೆ ತನ್ನ ತಂಡವನ್ನು ಪ್ರಕಟಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಪ್ರತಿಷ್ಠಿತ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಹಿಂದೂ ಆಟಗಾರನೇ ಮುನ್ನಡೆಸುತ್ತಿದ್ದಾರೆ. ಅಂದಹಾಗೆ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಲಿಟನ್ ದಾಸ್ ಮುನ್ನಡೆಸುತ್ತಿದ್ದಾರೆ. ಲಿಟನ್ ದಾಸ್ ಬಾಂಗ್ಲಾದಲ್ಲಿ ವಾಸಿಸುತ್ತಿರುವ ಬಂಗಾಳಿ ಹಿಂದೂ ಕುಟುಂಬದ ಸದಸ್ಯ.
ಲಿಟನ್ ದಾಸ್ ಈ ಹಿಂದೆ ತಮ್ಮ ಧಾರ್ಮಿಕ ನಂಬಿಕೆಯಿಂದಾಗಿ ಟ್ರೋಲ್ ಆಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾ ತಂಡವನ್ನು ಲಿಟನ್ ದಾಸ್ ಮುನ್ನಡೆಸುತ್ತಿದ್ದಾರೆ. 2025ರ ಮೇನಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಅವರ ಬದಲಿಗೆ ಲಿಟನ್ ದಾಸ್ ಅವರಿಗೆ ಚುಕ್ಕಾಣಿಯನ್ನು ನೀಡಲಾಯಿತು. ಅಂದಿನಿಂದ ಇವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಇವರು ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ನೆರವಾಗಿದ್ದಾರೆ. ಹೀಗಾಗಿ ಇವರು ಬಾಂಗ್ಲಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಕರೆಯಾಲಗುತ್ತದೆ.

ದಶಕಗಳಿಂದ ಬಾಂಗ್ಲಾದೇಶದ ಪರ ಆಡುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಲಿಟನ್ ದಾಸ್ ಭರವಸೆಯ ಆಟಗಾರ. ಇವರು ತಮ್ಮ ಚೊಚ್ಚಲ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಭಾರತದ ವಿರುದ್ಧವೇ ಆಡಿದ್ದಾರೆ. ಲಿಟನ್ ದಾಸ್ ದುಬೈನಲ್ಲಿ 2018ರಲ್ಲಿ ನಡೆದಿದ್ದ ಏಕದಿನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ಏಕದಿನ ಫಾರ್ಮೆಟ್ನಲ್ಲಿ ಮೊದಲ ಶತಕ ಬಾರಿಸಿದ್ದರು. ಅಂದು ಬಾಂಗ್ಲಾದೇಶ ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಲಿಟನ್ ದಾಸ್ ಮಾತ್ರ ಎಲ್ಲರ ಗಮನ ಸೆಳೆದಿದ್ದರು.
ಲಿಟನ್ ದಾಸ್ ಬಾಂಗ್ಲಾದೇಶದ ಪರ 120 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ 126ರ ಸ್ಟ್ರೈಕ್ ರೇಟ್ ಹಾಗೂ 23ರ ಸರಾಸರಿಯಲ್ಲಿ 2655 ರನ್ ಸಿಡಿಸಿದ್ದಾರೆ. ಈ ವೇಳೆ 16 ಅರ್ಧಶತಕಗಳು ಸಹ ಸೇರಿವೆ.
ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ), ಮೊಹಮ್ಮದ್ ಸೈಫ್ ಹಸನ್ (ಉಪನಾಯಕ), ತಂಜಿದ್ ಹಸನ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹರಿದೋಯ್, ಶಮೀಮ್ ಹೊಸೈನ್, ಖಾಜಿ ನೂರುಲ್ ಹಸನ್ ಸೋಹನ್, ಶಕ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹಮದ್, ಮುಸ್ತಫಿಜುರ್ ರೆಹಮಾನ್, ತಂಜಿಮ್ ಹಸನ್ ಸಾಕಿಬ್, ತಸ್ಕಿನ್ ಅಹಮದ್, ಮೊಹಮ್ಮದ್ ಸೈಫುದ್ದೀನ್ ಮತ್ತು ಶೋರಿಫುಲ್ ಇಸ್ಲಾಂ.