ಟಿ20 ವಿಶ್ವಕಪ್ಗೆ ದಿನೇಶ್ ಕಾರ್ತಿಕ್ ಬೇಡ ಎಂದಿದ್ದ ಗಂಭೀರ್ಗೆ ತಿವಿದ ಸುನಿಲ್ ಗವಾಸ್ಕರ್!

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿ ತಂಡವನ್ನು ಹಲವಾರು ಪಂದ್ಯಗಳಲ್ಲಿ ಗೆಲ್ಲಿಸಿ ಫಿನಿಶರ್ ಎಂಬ ಟ್ಯಾಗ್ ಪಡೆದ ದಿನೇಶ್ ಕಾರ್ತಿಕ್ ಟೂರ್ನಿಯಲ್ಲಿ ತಾನು ನೀಡಿದ ಅದ್ಬುತ ಪ್ರದರ್ಶನದ ನೆರವಿನಿಂದ ಮತ್ತೆ ಟೀಮ್ ಇಂಡಿಯಾದಲ್ಲಿ ಸೀಟ್ ಗಿಟ್ಟಿಸಿಕೊಂಡರು.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ದಿನೇಶ್ ಕಾರ್ತಿಕ್ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ತನ್ನ ಕನಸು ಎಂಬುದನ್ನು ಹೇಳಿಕೊಂಡಿದ್ದರು. ದಿನೇಶ್ ಕಾರ್ತಿಕ್ ಈ ಹೇಳಿಕೆ ನೀಡಿದ ಬೆನ್ನಲ್ಲೇ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ವಯಸ್ಸಾದ ನಂತರ ಈ ರೀತಿಯ ಕನಸೇಕೆ ಎಂದು ಕಟು ಟೀಕೆ ಮಾಡಿ ದಿನೇಶ್ ಕಾರ್ತಿಕ್ ಅವರನ್ನು ಕಡೆಗಣಿಸಿದ್ದರು. ಆದರೆ ಈ ಎಲ್ಲಾ ಟೀಕೆ ಮತ್ತು ಅವಮಾನಗಳಿಗೆ ಬ್ಯಾಟ್ ಮೂಲಕ ಉತ್ತರ ನೀಡಿದ ದಿನೇಶ್ ಕಾರ್ತಿಕ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿದು ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ.
ಅದರಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆಯಷ್ಟೇ ನಡೆದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ತಂಡ ಅಲ್ಪ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ 27 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 55 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹೀಗೆ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ದಿಗ್ಗಜ ಸುನಿಲ್ ಗವಾಸ್ಕರ್ ಕಾರ್ತಿಕ್ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಹಿಂದೆ ಗೌತಮ್ ಗಂಭೀರ್ ನೀಡಿದ್ದ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಗಂಭೀರ್ ಹೇಳಿಕೆಗೆ ಗವಾಸ್ಕರ್ ತಿರುಗೇಟು
ಕಾರ್ತಿಕ್ ಪ್ರದರ್ಶನವನ್ನು ಕೊಂಡಾಡಿ ಮಾತನಾಡಿದ ಸುನಿಲ್ ಗವಾಸ್ಕರ್ "ದಿನೇಶ್ ಕಾರ್ತಿಕ್ಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದಿಲ್ಲ ಎಂದ ಮೇಲೆ ಆತನನ್ನು ಏಕೆ ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಯನ್ನು ಕೆಲವರು ಹಾಕುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆತನಿಗೆ ಆಡುವ ಅವಕಾಶ ಸಿಗುವುದಿಲ್ಲ ಎಂದು ಹೇಗೆ ಹೇಳುತ್ತೀರಾ? ತಂಡಕ್ಕೆ ಮುಖ್ಯವಾಗಿ ಬೇಕಾಗಿರುವ ಆಟಗಾರ ಆತನೇ ಆಗಿರಬಹುದು. ಆಟಗಾರನ ಫಾರ್ಮ್ ಕಡೆ ನೋಡಿ, ಖ್ಯಾತಿ ಮತ್ತು ಹೆಸರಿನ ಕಡೆ ಅಲ್ಲ" ಎಂದು ಹೇಳಿಕೆ ನೀಡಿದ್ದು, ದಿನೇಶ್ ಕಾರ್ತಿಕ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದ ಗೌತಮ್ ಗಂಭೀರ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಗಂಭೀರ್ ನೀಡಿದ್ದ ಹೇಳಿಕೆ ಇದು
ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಆರಂಭವಾದ ನಂತರ ಮಾತನಾಡಿದ್ದ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಆಗಮಿಸಿದ ನಂತರ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದಿಲ್ಲ, ಹೀಗಾಗಿ ಅವರನ್ನು ಟಿ ಟ್ವೆಂಟಿ ವಿಶ್ವಕಪ್ಗೆ ಆಯ್ಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.

ಆತನ ವಯಸ್ಸಿನ ಕಡೆ ನೋಡಬೇಡಿ
ಇನ್ನೂ ಮುಂದುವರಿದು ಮಾತನಾಡಿರುವ ಸುನಿಲ್ ಗವಾಸ್ಕರ್ "ದಿನೇಶ್ ಕಾರ್ತಿಕ್ ಪ್ರತಿ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಬೇಕು ಎಂಬುದನ್ನು ಹೇಗೆ ನಿರೀಕ್ಷಿಸುತ್ತೀರಿ. ಆತನಿಗೆ ಹೆಚ್ಚು ಅವಕಾಶಗಳು ದೊರೆತಿಲ್ಲ, ಆರನೇ ಅಥವಾ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆತ 20 ಎಸೆತಗಳಲ್ಲಿ 40 ರನ್ ಬಾರಿಸಬಲ್ಲ ಸಾಮರ್ಥ್ಯವಿರುವಂತಹ ಆಟಗಾರನಾಗಿದ್ದಾನೆ. ಆತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಅರ್ಗನಾಗಿರುವ ಆಟಗಾರ. ಆತನ ವಯಸ್ಸನ್ನು ನೋಡಬೇಡಿ ಪ್ರದರ್ಶನವನ್ನು ನೋಡಿ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications