ಸೋಮವಾರ, ಜುಲೈ 31ರಂದು ದಂಬುಲ್ಲಾ ಜೈಂಟ್ಸ್ ಮತ್ತು ಗಾಲೆ ಗ್ಲಾಡಿಯೇಟರ್ಸ್ ನಡುವಿನ ರೋಚಕ ಪಂದ್ಯದ ಸಂದರ್ಭದಲ್ಲಿ ಅನಿರೀಕ್ಷಿತ ಪ್ರೇಕ್ಷಕರೊಬ್ಬರು ಮೈದಾನದಲ್ಲಿ ಹಾಜರಾಗಿ ಗಮನ ಸೆಳೆದರು.
ಶ್ರೀಲಂಕಾದ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) ಪಂದ್ಯಾವಳಿಯ ದಂಬುಲ್ಲಾ ಜೈಂಟ್ಸ್ ಮತ್ತು ಗಾಲೆ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಮೈದಾನದಲ್ಲಿ ಅನಿರೀಕ್ಷಿತವಾಗಿ ಹಾವು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಪಂದ್ಯವು ತನ್ನ ಎಂದಿನ ತೀವ್ರತೆಯೊಂದಿಗೆ ಸಾಗುತ್ತಿತ್ತು. ಗಾಲೆ ಗ್ಲಾಡಿಯೇಟರ್ಸ್ ತಂಡವು ದಂಬುಲ್ಲಾ ಜೈಂಟ್ಸ್ ತಂಡಕ್ಕೆ 181 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಸಮತೋಲಿತ ತಂಡವನ್ನು ಆಡಿಸಿದ ಗಾಲೆ ಗ್ಲಾಡಿಯೇಟರ್ಸ್ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಶ್ರೀಲಂಕಾದ ಅಂತಾರಾಷ್ಟ್ರೀಯ ಆಟಗಾರ ಭಾನುಕಾ ರಾಜಪಕ್ಸೆ 34 ಎಸೆತಗಳಲ್ಲಿ 48 ರನ್ ಗಳಿಸಿ ತಂಡಕ್ಕೆ ಗಮನಾರ್ಹ ಕೊಡುಗೆ ನೀಡಿದರು. ಅವರಿಗೆ ಸ್ಟಾರ್ ಆಲ್ರೌಂಡರ್ಗಳಾದ ಶಕಿಬ್ ಅಲ್ ಹಸನ್ 14 ಎಸೆತಗಳಲ್ಲಿ 23 ರನ್ ಮತ್ತು ನಾಯಕ ದಸುನ್ ಶನಕ 21 ಎಸೆತಗಳಲ್ಲಿ 42 ರನ್ಗಳ ಸಾಥ್ ನೀಡಿದರು.
181 ರನ್ಗಳ ಗುರಿ ಬೆನ್ನಟ್ಟಿದ ದಂಬುಲ್ಲಾ ಜೈಂಟ್ಸ್ ತಂಡ ನಾಲ್ಕು ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದರು. ಆಗ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಏಕಾಏಕಿ ಆಟವನ್ನು ನಿಲ್ಲಿಸಲಾಯಿತು.
ಪಂದ್ಯಕ್ಕೆ ಅನಿರೀಕ್ಷಿತ ಅಡಚಣೆಯು ಆಟಗಾರರು ಮತ್ತು ಪ್ರೇಕ್ಷಕರಿಗೆ ಅಚ್ಚರಿಯನ್ನುಂಟು ಮಾಡಿತು. ಏಕೆಂದರೆ, ಪಂದ್ಯದ ಅಂಪೈರ್ಗಳು ಉರಗವನ್ನು ಮೈದಾನದಿಂದ ಹೊರಕಳಿಸಲು ಹರಸಾಹಸಪಟ್ಟರು.
ಈ ಘಟನೆಯು ಕಳೆದ ವರ್ಷದ ಆರಂಭದಲ್ಲಿ ಗ್ವಾಟೆಮಾಲನ್ ಫುಟ್ಬಾಲ್ ಪಂದ್ಯದಲ್ಲಿ ಇದೇ ರೀತಿಯ ಘಟನೆಯನ್ನು ನೆನಪಿಸಿತು. ಫೆಬ್ರವರಿ 2022ರಲ್ಲಿ 1.5 ಮೀಟರ್ ಉದ್ದದ ಹಾವು ಮೈದಾನದಲ್ಲಿ ಕಾಣಿಸಿಕೊಂಡಾಗ ನ್ಯೂವಾ ಕಾನ್ಸೆಪ್ಸಿಯಾನ್ ಮತ್ತು ಮುನ್ಸಿಪಲ್ ನಡುವಿನ ಮೊದಲ ಡಿವಿಷನ್ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಹಾವನ್ನು ಸೆರೆಹಿಡಿದು ಹೊರಹಾಕಲು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೈದಾನದ ಅನೇಕ ಸಿಬ್ಬಂದಿ ಮಧ್ಯಪ್ರವೇಶಿಸಿದ್ದರಿಂದ ಆಟವನ್ನು ನಿಲ್ಲಿಸಲಾಗಿತ್ತು.
ಶ್ರೀಲಂಕಾ ಪ್ರೀಮಿಯರ್ ಲೀಗ್ಗೆ ಹಿಂತಿರುಗಿದರೆ, ಪಂದ್ಯದ ಅಂಪೈರ್ಗಳು ಹಾವನ್ನು ಬೌಂಡರಿ ಹಗ್ಗದಿಂದ ಹೊರಕಳಿಸುವಲ್ಲಿ ಯಶಸ್ವಿಯಾದರು. ನಂತರ ಪಂದ್ಯವನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟರು.
ಹಾವಿನಿಂದ ಅಡಚಣೆಯ ಹೊರತಾಗಿಯೂ, ದಂಬುಲ್ಲಾ ಜೈಂಟ್ಸ್ ಮಧ್ಯಮ ಕ್ರಮಾಂಕವು ಗಾಲೆ ಗ್ಲಾಡಿಯೇಟರ್ಸ್ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡಿ 180 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್ಗೆ ತಳ್ಳಿದರು.
ಸೂಪರ್ ಓವರ್ನಲ್ಲಿ ದಂಬುಲ್ಲಾ ಜೈಂಟ್ಸ್ 10 ರನ್ ಗಳಿಸಿ, ಗಾಲೆ ಗ್ಲಾಡಿಯೇಟರ್ಸ್ ಗೆಲುವಿಗೆ 11 ರನ್ಗಳ ಗುರಿ ನೀಡಿತು. ಆದರೆಮ ಭಾನುಕಾ ರಾಜಪಕ್ಸೆ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಗಾಲೆ ಗ್ಲಾಡಿಯೇಟರ್ಸ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ದಸುನ್ ಶನಕ ಅವರ ನಿರ್ಣಾಯಕ ಬ್ಯಾಟಿಂಗ್ ಮತ್ತು ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 3 ಪ್ರಮುಖ ವಿಕೆಟ್ ಪಡೆದಿದ್ದಕ್ಕಾಗಿ, ಪಂದ್ಯಶ್ರೇಷ್ಠ ಆಟಗಾರ ಎಂದು ಪ್ರಶಸ್ತಿ ಪಡೆದರು.