ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ವಿರುದ್ಧ ಸೋಮವಾರ ನಡೆದ ಪಂದ್ಯ ಸಾಕಷ್ಟು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಲೋಸ್ಕೋರಿಂಗ್ ಪಂದ್ಯವಾದರೂ ಕಡೆಯ ಹಂತದವರೆಗೂ ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿದೆ. ಈ ಪಂದ್ಯದ ಮುಕ್ತಾಯವಾದ ಬಳಿಕ ನಡೆದ ಕೆಲ ಘಟನೆಗಳು ಈಗ ಚರ್ಚೆಗೆ ಕಾರಣವಾಗಿದೆ. ಗೌತಮ್ ಗಂಭೀರ್ ಹಾಘೂ ವಿರಾಟ್ ಕೊಹ್ಲಿ ನಡುವಿನ ಮಾತಿನ ಚಕಮಕಿ ಭಾರೀ ಸದ್ದು ಮಾಡಿದೆ.
ಇದೀಗ ಆರ್ಸಿಬಿ ಈ ಪಂದ್ಯದಲ್ಲಿ ಗೆದ್ದ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್ನ ಸಂಭ್ರಮಾಚರಣೆಯ ವಿಡಿಯೋವನ್ನು ಆರ್ಸಿಬಿ ಹೊರಬಿಟ್ಟಿದೆ. ಈ ವಿಡಿಯೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಸಾಧಿಸಿದ ಗೆಲುವನ್ನು ಆರ್ಸಿಬಿ ತಂಡದ ಆಟಗಾರರು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಮಾತು ಕೂಡ ಈ ವಿಡಿಯೋದಲ್ಲಿ ದಾಖಲಾಗಿದ್ದು ವೈರಲ್ ಆಗಿದೆ. ಈ ಮೂಲಕ ವಿರಾಟ್ ಕೊಹ್ಲಿ ತನ್ನ ಆಕ್ರಮಣಕಾರಿ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದು ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೊಟ್ರೆ ತೆಗೆದುಕೊಳ್ಳಲು ಸಿದ್ಧವಿರಬೇಕು
ಗೆದ್ದ ಬಳಿಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ರೂಮ್ನಲ್ಲಿ ತನ್ನ ಬಟ್ಟೆಯನ್ನು ಬದಲಿಸುತ್ತಾ ಆಟಗಾರರನ್ನು ಉದ್ದೇಶಿಸಿ "ಇದೊಂದು ಸಿಹಿಯಾದ ಗೆಲುವು ಹುಡುಗ್ರೇ... ಸಿಹಿಯಾದ ಗೆಲುವು" ಎಂದು ಸಂಭ್ರಮಿಸಿದರು. ಕೆಲ ಹೊತ್ತುನ ಬಳಿಕ ವಿರಾಟ್ ಬಟ್ಟೆಯನ್ನು ಹುಡುಕುತ್ತಾ, "ಕೊಟ್ಟರೆ ಅದನ್ನು ವಾಪಾಸ್ ಪಡೆಯಲು ಸಿದ್ಧವಿರಬೇಕು. ಇಲ್ಲಾಂದ್ರೆ ಕೊಡಬಾರದು" ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಿಲುವನ್ನು ವಿರಾಟ್ ಕೊಹ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಎಲ್ಎಸ್ಜಿ ವರ್ತನೆಗೆ ಅದರದ್ದೇ ರೀತಿಯಲ್ಲಿ ಪ್ರತ್ಯುತ್ತರ!
ಆರ್ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಬೆಂಗಳೂರಿನಲ್ಲಿ ಗೆಲುವು ಸಾಧಿಸಿದ ಬಳಿಕ ತೋರಿದ ವರ್ತನೆ ಅಭಿಮಾನಿಗಳಿಗೆ ಹಿತವೆನಿಸಿರಲಿಲ್ಲ. ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಎಲ್ಎಸ್ಜಿ ಗೆಲುವು ಸಾಧಿಸಿದ ಬಳಿಕ ತಂಡದ ಆಟಗಾರರ ಅತಿಯಾದ ವರ್ತನೆಯ ಜೊತೆಗೆ ಮೆಂಟರ್ ಗಂಭೀರ್ ಅವರು ಆರ್ಸಿಬಿ ಅಭಿಮಾನಿಗಳನ್ನು ಉದ್ದೇಶಿಸಿ ಸುಮ್ಮನಿರುವಂತೆ ಸನ್ನೆಯ ಮೂಲಕ ತೋರಿಸಿದ್ದರು. ಇದು ಆರ್ಸಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಎಲ್ಎಸ್ಜಿ ವಿರುದ್ಧ ಅದರ ತವರಿನಲ್ಲಿಯೇ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ವರ್ತನೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದಂತಿತ್ತು. ಅಂತಿಮ ಹಂತದಲ್ಲಿ ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಕೊಹ್ಲಿ ವಿರುದ್ಧ ಬಾಲಿಶತನದಿಂದ ವರ್ತಿಸಲು ಕೂಡ ಇದು ಕಾರಣವಾಗಿತ್ತು.
ಗೌತಮ್ ಗಂಭೀರ್ ಬಾಲಿಶತನದ ವರ್ತನೆ
ಪಂದ್ಯದ ಮುಕ್ತಾಯದ ಬಳಿಕ ಗಂಭೀರ್ ಅವರ ಬಾಲಿಶತನದ ವರ್ತನೆ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಎದುರಾಳಿ ತಂಡದ ಆಟಗಾರ ಕೇಲ್ ಮೇಯರ್ಸ್ ಜೊತೆಗೆ ಮಾತನಾಡುತ್ತ ಮೈದಾನದಿಂದ ಹೊರಗಡೆಗೆ ಧಾವಿಸುತ್ತಿದ್ದರು. ಆ ಸಂದರ್ಭದಲ್ಲಿ ಕೇಲ್ ಮೇಯರ್ಸ್ ಸನಿಹಕ್ಕೆ ಬಂದ ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಕೊಹ್ಲಿಯ ಜೊತೆಗೆ ಮಾತು ಮುಂದುವರಿಸದಂತೆ ಕೇಲ್ ಮೇಯರ್ಸ್ ಅವರನ್ನು ತಡೆದು ದೂರಕ್ಕೆ ಎಳೆದೊಯ್ದರು. ನಂತರ ವಿರಾಟ್ ಕೊಹ್ಲಿ ಜೊತೆಗೆ ಗಂಭೀರ್ ಕಾಲ್ಕೆರೆದು ಜಗಳಕ್ಕೆ ನಿಂತರು.
ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೊಹ್ಲಿ
ಇನ್ನು ಆರ್ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಈ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. "ಈ ಹಾದಿಯಲ್ಲಿ ಈ ಗೆಲುವು ನಮಗೆ ಬಹಳ ಮುಖ್ಯವಾಗಿತ್ತು. ತವರಿನ ತಂಡಕ್ಕಿಂತಲೂ ಇಲ್ಲಿ ನಮಗೆ ದೊರೆತ ಬೆಂಬಲ ನಂಬಲಸಾಧ್ಯವಾಗಿತ್ತು. ಇದು ತಂಡವಾಗಿ ನಾವು ಎಷ್ಟು ಪ್ರೀತಿಯನ್ನು ಪಡೆದುಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಸಹಿಹಿಯಾದ ಗೆಲುವಾಗಿದ್ದು ಹಲವು ಕಾರಣಗಳಿಗಾಗಿ ಉತ್ತಮವಾದ ಅನುಭವ ನೀಡಿದೆ. ಬಹಳ ಮುಖ್ಯವಾಗಿ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ನಾವು ತೋರಿದ ಮನೋಭಾವ ಬಹಳ ಮುಖ್ಯವಾಗುತ್ತದೆ. ನಮ್ಮಿಂದ ಇದು ಸಾಧ್ಯ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ಕಾರಣದಿಂದಾಗಿಯೇ ನಾವು ಗೆಲುವು ಸಾಧಿಸಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ