
ಇಂಡಿಯನ್ ಪ್ರೀಮಿಯರ್ ಲೀಗ್, ಸಾಮಾನ್ಯ ಆಟಗಾರರನ್ನು ಸೂಪರ್ ಸ್ಟಾರ್ ಗಳನ್ನಾಗಿ ಮಾಡಿ, ಕೋಟಿ ಕೋಟಿ ರುಪಾಯಿ ಹಣದ ಹೊಳೆಯನ್ನೇ ಹರಿಸುವ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಇಂತಹ ಐಪಿಎಲ್ನಲ್ಲಿ ಆಡಬೇಕೆನ್ನುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ.
ಪ್ರತಿ ಬಾರಿ ಹರಾಜಿನಲ್ಲಿ ಎಲ್ಲಾ ತಂಡಗಳು ದೊಡ್ಡ ದೊಡ್ಡ ಆಟಗಾರರ ಜೊತೆ ಯುವ ಪ್ರತಿಭಾವಂತ ಆಟಗಾರರನ್ನು ಖರೀದಿ ಮಾಡುತ್ತವೆ. ಹೀಗೆ ಐಪಿಎಲ್ನಲ್ಲಿ ಆಡುವ ಮೂಲಕ ದೊಡ್ಡ ಕ್ರಿಕೆಟಿಗನಾಗಬೇಕು ಎನ್ನುವ ಕನಸಿಟ್ಟುಕೊಂಡು ಬಂದ ಯುವ ಕ್ರಿಕೆಟಿಗನೊಬ್ಬ ಮೋಸದ ಜಾಲಕ್ಕೆ ಬಲಿಯಾಗಿದ್ದಾನೆ.
ಲಕ್ನೋ ಮೂಲಕ ಆಟಗಾರ ಅಭಿಷೇಕ್ ಸಿಂಗ್ ಎನ್ನುವಾತನೇ ಮೋಸ ಹೋಗಿರುವ ಕ್ರಿಕೆಟಿಗನಾಗಿದ್ದಾನೆ. ಕೃಷ್ಣ ಕುಮಾರ್ ಎನ್ನುವ ವ್ಯಕ್ತಿ ಐಪಿಎಲ್ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರುಪಾಯಿ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. 2019ರಲ್ಲಿ ಕೆಡಿ ಸಿಂಗ್ ಬಾಬು ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಪರಿಚಯವಾದ ಕೃಷ್ಣ ಕುಮಾರ್ ಐಪಿಎಲ್ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದಾನೆ.
ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತ
ಗೌತಮ್ ಪಲ್ಲಿ ಪೋಲಿಸರಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಆರೋಪಿ ಮೊದಲು ಐಪಿಎಲ್ನಲ್ಲಿ ಅವಕಾಶ ಕೊಡಿಸಲು 17 ಲಕ್ಷ ರುಪಾಯಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದನು. ಆದರೆ, ಸಂತ್ರಸ್ತ ಅಷ್ಟು ಮೊತ್ತವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ ನಂತರ 5 ಲಕ್ಷ ರುಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ. ಐಪಿಎಲ್ಗೆ ಸೇರುವ ಕನಸಿನಿಂದ ಆತ 5 ಲಕ್ಷ ರುಪಾಯಿಗಳನ್ನು ನೀಡಿದ್ದಾನೆ.
"ಹೆತ್ತವರಿಂದ 5 ಲಕ್ಷ ರುಪಾಯಿಗಳನ್ನು ತೆಗೆದುಕೊಂಡು ಬಂದು ಚೆಕ್ ಮೂಲಕ ಆರೋಪಿಗೆ ಹಣ ಪಾವತಿ ಮಾಡಿದ್ದೇನೆ. ಅಂದಿನಿಂದ ನನ್ನನ್ನು ಸಾಕಷ್ಟು ಕಾಯಿಸಲಾಗಿದೆ. ಐಪಿಎಲ್ನಲ್ಲಿ ಆಡುವ ಸಲುವಾಗಿ ಅರುಣಾಚಲ ಪ್ರದೇಶದಲ್ಲಿ ಹಲವು ತಿಂಗಳುಗಳ ಕಾಲ ಕ್ಯಾಂಪ್ ಮಾಡಿದ್ದೇನೆ, ಆದರೆ ತಂಡದಲ್ಲಿ ಆಡಲು ಅವಕಾಶ ಸಿಗಲಿಲ್ಲ." ಎಂದು ಅಭಿಷೇಕ್ ಸಿಂಗ್ ಆರೋಪ ಮಾಡಿದ್ದಾರೆ.

ಹಣ ವಾಪಸ್ ಕೇಳಿದರೆ ಬೆದರಿಕೆ
ಆಡಲು ಅವಕಾಶ ಸಿಗದೇ ಇದ್ದಾಗ, ಅಭಿಷೇಕ್ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಆದರೆ, ಹಣ ಪಡೆದ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಭಿಷೇಕ್ ಆರೋಪ ಮಾಡಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದಾನೆ.
ಪೊಲೀಸ್ ಪ್ರಧಾನ ಕಚೇರಿ ಹೆಚ್ಚುವರಿ ಡಿಸಿಪಿ ಅಖಿಲೇಶ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಮತ್ತು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಸೈಬರ್ ವಿಭಾಗದ ಸಹಾಯ ಕೇಳಿರುವುದಾಗಿ ಹೇಳಿದ್ದಾರೆ.

ಗುಜರಾತ್ನಲ್ಲಿ ಪತ್ತೆಯಾಗಿದ್ದ ಮಹಾ ಮೋಸದ ಜಾಲ
2020ರಲ್ಲಿ ಗುಜರಾತ್ನ ಮೆಹ್ಸಾನಾದಲ್ಲಿ ಕೃಷಿ ಕಾರ್ಮಿಕರ ಗುಂಪಿ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಜೆರ್ಸಿಗಳನ್ನು ಹಾಕಿ ನಕಲಿ ಪಂದ್ಯಾವಳಿ ನಡೆಸಿದ್ದರು. ಕೃಷಿ ಮೈದಾನದಲ್ಲಿ ನಕಲಿ ಕ್ರಿಕೆಟ್ ಮೈದಾನ ನಿರ್ಮಿಸಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಗಳಂತಹ ತಂಡಗಳ ಜರ್ಸಿಗಳನ್ನು ಧರಿಸಿ ಆಟವನ್ನು ಆಡಲು ಸುಮಾರು 20 ಕೃಷಿ ಕಾರ್ಮಿಕರು ಮತ್ತು ಸ್ಥಳೀಯ ಯುವಕರನ್ನು ನೇಮಿಸಿಕೊಂಡಿದ್ದರು.
ರಷ್ಯನ್ನರನ್ನು ಒಳಗೊಂಡ ಈ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಸುಳಿವನ್ನು ಪಡೆದು ದಾಳಿ ಮಾಡಿದ್ದ ಮೆಹ್ಸಾನಾ ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ನಾಲ್ವರು ಆರೋಪಿಗಳನ್ನು ಬಂಧಿಸಿತ್ತು.