ಭೋಪಾಲ್, ಆಗಸ್ಟ್ 11: ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿಯನ್ನು ಸಚಿನ್ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿದೆ. ಈ ಕುರಿತ ಅರ್ಜಿಯೊಂದನ್ನು ಇಲ್ಲಿನ ನ್ಯಾಯಾಲಯ ತಳ್ಳಿ ಹಾಕಿದೆ.ವಾಣಿಜ್ಯ ಉದ್ದೇಶಿತ ಜಾಹೀರಾತುಗಳಲ್ಲಿ 'ಭಾರತ ರತ್ನ'ಪ್ರಶಸ್ತಿಗೆ ಸಚಿನ್ ಅಗೌರವ ಸಲ್ಲಿಸಿ, ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿ ಹಾಕಲಾಗಿತ್ತು.
'ಭಾರತ ರತ್ನ' ಗೌರವವನ್ನು ವಾಣಿಜ್ಯ ಜಾಹೀರಾತುಗಳಲ್ಲಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ವಿರುದ್ಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. [ಸಚಿನ್ ತೆಂಡೂಲ್ಕರ್ ಕೈತಪ್ಪಲಿದೆಯೆ 'ಭಾರತ ರತ್ನ'?]
ಪ್ರಶಸ್ತಿ, ಗೌರವಗಳನ್ನು ವಾಣಿಜ್ಯ ಉದ್ದೇಶಿತ ಜಾಹೀರಾತುಗಳನ್ನು ಬಳಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ಪರಿಗಣಿಸಿ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸಾಲಿಸಿಟರ್ ಜನರಲ್ ಅವರಿಗೆ ಹೈಕೋರ್ಟ್ ನಿರ್ದೇಶಿಸಿತ್ತು.

ಅಲ್ಲದೆ, ಈ ವಿಷಯ ಹೈಕೋರ್ಟ್ನ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ಸರ್ಕಾರ ಎದುರು ಈ ಸಮಸ್ಯೆಯನ್ನು ಎತ್ತಬೇಕು. ಈ ವಿಷಯದ ಕುರಿತು ನಾವು ಮಧ್ಯಪ್ರವೇಶಿಸುವುದ್ ಸರಿಯಲ್ಲ ಎಂದು ಜಸ್ಟೀಸ್ ರಾಜೇಂದ್ರ ಮೆನನ್ ಹಾಗೂ ಜಸ್ಟೀಸ್ ಗುಪ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ಕ್ರಿಕೆಟ್ನಲ್ಲಿ ಹಲವಾರು ವಿಶ್ವ ದಾಖಲೆಯನ್ನು ನಿರ್ಮಿಸಿರುವ ಸಚಿನ್ ಜನಪ್ರಿಯ ವ್ಯಕ್ತಿಯಾಗಿದ್ದು, ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಗೌರವವನ್ನು ವಾಣಿಜ್ಯ ಜಾಹೀರಾತು ಪ್ರಚಾರಕ್ಕೆ ಬಳಸಿಕೊಂಡು ಹಣ ಸಂಪಾದಿಸುತ್ತಿದ್ದಾರೆ. ಇದು ಭಾರತರತ್ನಕ್ಕೆ ಮಾಡಿರುವ ಅವಮಾನವಾಗಿದೆ ಎಂದು ವಾದಿಸುತ್ತಿರುವ ಭೋಪಾಲದ ನಿವಾಸಿ ವಿಕೆ ನಸ್ವಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಫೆ.4, 2014ರಂದು ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಅವರು ಕರ್ನಾಟಕ ಮೂಲದ ವಿಜ್ಞಾನಿ ಸಿಎನ್ ಆರ್ ರಾವ್ ಹಾಗೂ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಿ ಗೌರವಿಸಿದ್ದರು. (ಪಿಟಿಐ)