ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಅಮೋಘ ಪ್ರದರ್ಶನ ನೀಡಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಕರುಣ್ ನಾಯರ್ ಪಡೆ 9 ರನ್ಗಳ ಜಯ ಸಾಧಿಸಿದೆ. ಈ ಮೂಲಕ ಮೈಸೂರು ಫೈನಲ್ ಪ್ರವೇಶಿಸಿದೆ.
ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 9 ವಿಕೆಟ್ಗಳಿಂದ ಗುಲ್ಬರ್ಗ ಮಿಸ್ಟೆಕ್ಸ್ ತಂಡವನ್ನು ಮಣಿಸಿ ಫೈನಲ್ಗೆ ಅರ್ಹತೆ ಪಡೆದಿತ್ತು. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಫೈಟ್ ನಡೆಸಲಿವೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹುಬ್ಬಳ್ಳಿ ನಿಗದಿತ ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಸೇರಿಸಿ ಸೋಲು ಕಂಡಿತು.
ಟೂರ್ನಿಯುದಕ್ಕೂ ಅಮೋಘ ಬ್ಯಾಟಿಂಗ್ ನಡೆಸಿದ್ದ ಕರುಣ್ ನಾಯರ್ ಹಾಗೂ ಅಜಿತ್ ಕಾರ್ತಿಕ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್ಗೆ ಶ್ರೀನಿವಾಸ್ ಶರತ್ ಹಾಗೂ ಎಸ್ಯು ಕಾರ್ತಿಕ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೂರನೇ ವಿಕೆಟ್ಗೆ 61 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು.
ಮಧ್ಯಮ ಕ್ರಮಾಂಕದಲ್ಲಿ ಶ್ರೀನಿವಾಸ್ ಶರತ್ 26, ಸುಮಿತ್ ಕುಮಾರ್ 18, ಮನೋಜ್ ಭಂಡಾರೆ 26 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಉತ್ತಮ ಆಟದ ಪರಿಣಾಮವೇ ಮೈಸೂರು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಹುಬ್ಬಳ್ಳಿ ಪರ ಎಲ್ ಆರ್ ಕುಮಾರ್ 3, ವಿದ್ವತ್ ಕಾವೇರಪ್ಪ 2 ವಿಕೆಟ್ ಪಡೆದರು.
ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಸ್ಟಾರ್ ಬ್ಯಾಟರ್ಗಳು ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮೊಹಮ್ಮದ್ ತಹಾ, ಅನೀಶ್ವರ್ ಗೌತಮ್, ಮನೀಶ್ ಪಾಂಡೆ ರನ್ ಕಲೆ ಹಾಕುವಲ್ಲಿ ವಿಫಲರಾದರು. ತಿಪ್ಪಾ ರೆಡ್ಡಿ (33), ಕೃಷ್ಣ ಶ್ರೀಜೇತ್ (20), ಕೊಂಚ ಎದುರಾಳಿ ಬೌಲರ್ಗಳನ್ನು ಕಾಡಿದರು.
ಕೆಪಿ ಕಾರ್ತಿಕೇಯ ಹಾಗೂ ಮನಂವತ್ ಕುಮಾರ್ ಅವರು ಹುಬ್ಬಳ್ಳಿ ಟೈಗರ್ಸ್ ಪರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ಕೊಂಚ ಮೈಸೂರು ಬೌಲರ್ಗಳ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದ್ದರು. ಆದರೆ ಮೈಸೂರು ನೀಡಿದ್ದ ಸವಾಲನ್ನು ಮಾತ್ರ ಮೆಟ್ಟಿನಿಲ್ಲಲು ಸಾಧ್ಯವೇ ಆಗಲಿಲ್ಲ. ಹುಬ್ಬಳ್ಳಿ ಪರ ಕಾರ್ತಿಕೇಯ ಅಜೇಯ 61 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಕೊನೆಯ ಓವರ್ನ ನಾಲ್ಕನೇ ಎಸೆತದಲ್ಲಿ ಕಾರ್ತಿಕೇಯ್ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಬೌಂಡರಿ ಲೈನ್ನಲ್ಲಿ ಫೀಲ್ಡ್ ಮಾಡುತ್ತಿದ್ದ ಕರುಣ್ ನಾಯರ್ ಅಮೋಘವಾಗಿ ನಾಲ್ಕು ರನ್ ಉಳಿಸಿದರು.