ಜಗದೀಶ್ ಸತೀಶ್ ಅವರ ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ 56 ರನ್ಗಳಿಂದ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯ 14ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 19.3 ಓವರ್ಗಳಲ್ಲಿ 165 ರನ್ಗಳಿಗೆ ಸರ್ವಪತನ ಹೊಂದಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹುಬ್ಬಳ್ಳಿ 109 ರನ್ಗಳಿಗೆ ಆಲೌಟ್ ಆಯಿತು. ಈ ಸೋಲಿನ ಮೂಲಕ ಹುಬ್ಬಳ್ಳಿ ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು. ಮೈಸೂರು ಆಡಿದ ಐದು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮೈಸೂರು ಪರ ಎಸ್ಯು ಕಾರ್ತಿಕ್ ಹಾಗೂ ಕರುಣ್ ನಾಯರ್ ಜವಾಬ್ದಾರಿಯುತ ಆಟವನ್ನು ಆಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಹುಬ್ಬಳ್ಳಿ ಮಾಡಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಹೊಡಿಯಿತು. ಈ ಜೋಡಿ ಎರಡನೇ ವಿಕೆಟ್ಗೆ 59ರನ್ಗಳ ಜೊತೆಯಾಟವನ್ನು ನೀಡಿತು.
ಕಾರ್ತಿಕ್ 34 ರನ್ ಬಾರಿಸಿ ಔಟ್ ಆದರು. ನಾಯಕ ಕರುಣ್ ನಾಯರ್ 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 66 ರನ್ ಸಿಡಿಸಿ ಔಟ್ ಆದರು. ಆಲ್ರೌಂಡರ್ ಮನೋಜ್ ಭಂಡಾರೆ 20 ರನ್ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ಯಾವೊಬ್ಬ ಬ್ಯಾಟರ್ ತಂಡಕ್ಕೆ ನೆರವಾಗಲಿಲ್ಲ. ಪರಿಣಾಮ ಮೈಸೂರು 165 ರನ್ಗಳಿಗೆ ಸರ್ವಪತನ ಕಂಡಿತು.
ಹುಬ್ಬಳ್ಳಿ ಪರ ತಿಪ್ಪಾ ರೆಡ್ಡಿ ಹಾಗೂ ಮೊಹಮ್ಮದ್ ತಹಾ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿದರು. ಉಳಿದಂತೆ ಮಧ್ಯಮ ಕ್ರಮಾಂದ ಯಾವೊಬ್ಬ ಬ್ಯಾಟರ್ ಜವಾಬ್ದಾರಿ ಅರಿತು ಬ್ಯಾಟ್ ಮಾಡಲಿಲ್ಲ. ಹುಬ್ಬಳ್ಳಿ ತಂಡದ ನಾಯಕ ಮನೀಷ್ ಪಾಂಡೆ ಗುರಿಯನ್ನು ಬೆನ್ನಟ್ಟುವ ಭರವಸೆ ಮೂಡಿಸಿದರು. ಆದರೆ ಇವರ ಇನ್ನಿಂಗ್ಸ್ 18 ರನ್ಗಳಿಗೆ ಕೊನೆ ಗೊಂಡಿತು. ಉಳಿದಂತೆ ಎಲ್ಆರ್ ಕುಮಾರ್ (19) ಹಾಗೂ ಕೆಸಿ ಕರಿಯಪ್ಪ (ಅಜೇಯ 12) ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಮೈಸೂರು ತಂಡದ ಪರ ಜೆ.ಸುಚಿತ್ ಅಮೋಘ ದಾಳಿಯನ್ನು ಸಂಘಟಿಸಿದರು. ಇವರು 4 ಓವರ್ಗಳಲ್ಲಿ 14 ರನ್ ನೀಡಿ ಅಮೂಲ್ಯ ನಾಲ್ಕು ವಿಕೆಟ್ ಕಬಳಿಸಿದರು. ವೇಗಿ ವಿದ್ಯಾಧರ್ ಪಾಟೀಲ್ ಹಾಗೂ ಆಲ್ರೌಂಡರ್ ಕೆ.ಗೌತಮ್ ತಲಾ ಎರಡು ವಿಕೆಟ್ ಪಡೆದರು.