ಭಾನುವಾರ, ಆಗಸ್ಟ್ 13ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ವಿಜಯ್ಕುಮಾರ್ ವೈಶಾಕ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ವಿರುದ್ಧ ಮುಖಭಂಗ ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು. ಇನ್ನು 138 ರನ್ಗಳ ಗುರಿ ಬೆನ್ನಟ್ಟಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಇನ್ನೂ 15 ಎಸೆತ ಮತ್ತು 6 ಬಾಕಿ ಇರುವಂತೆಯೇ ಗುರಿ ತಲುಪಿತು.
ಬೆಂಗಳೂರು ಬ್ಲಾಸ್ಟರ್ಸ್ ತಂಡ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ (4 ರನ್) ಮತ್ತು ದೇಗಾ ನಿಶ್ಚಲ್ (1 ರನ್) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಈ ಇಬ್ಬರೂ ಅಭಿಲಾಷ್ ಶೆಟ್ಟಿಗೆ ವಿಕೆಟ್ ನೀಡಿದರು.
ನಂತರ ಬಂದ ಜಸ್ವತ್ ಆಚಾರ್ಯ 29 ರನ್, ಪವನ್ ದೇಶಪಾಂಡೆ 14 ರನ್, ಸೂರಜ್ ಅಹುಜಾ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 62 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ಶುಭಾಂಗ್ ಹೆಗ್ಡೆ 11 ರನ್, ಲೋಚನ್ ಅಪ್ಪಣ್ಣ 10 ರನ್ ಗಳಿಸಿದರು.
ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಪರ ಬೌಲಿಂಗ್ನಲ್ಲಿ ಅಭಿಲಾಷ್ ಶೆಟ್ಟಿ 4 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರೆ, ಶರಣ್ ಗೌಡ 4 ಓವರ್ಗಳಲ್ಲಿ24 ರನ್ ನೀಡಿ 2 ವಿಕೆಟ್ ಪಡೆದರು.

138 ರನ್ಗಳ ಚೇಸಿಂಗ್ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ಎಲ್ ಆರ್ ಚೇತನ್ 36 ರನ್, ಆದರ್ಶ್ ಪ್ರಜ್ವಲ್ 31 ರನ್, ಅನೀಶ್ ಕೆವಿ 29 ರನ್, ಅಮಿತ್ ವರ್ಮಾ 28 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಬೌಲಿಂಗ್ನಲ್ಲಿ ಶುಭಾಂಗ್ ಹೆಗ್ಡೆ 4 ಓವರ್ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರೆ, ಸರ್ಫರಾಜ್ ಅಶ್ರಫ್ 1 ವಿಕೆಟ್ ಪಡೆದರು.
ಬೆಂಗಳೂರು ತಂಡದ ವಿರುದ್ಧ 3 ವಿಕೆಟ್ ಪಡೆದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಗುಲ್ಬರ್ಗ ತಂಡ ಅಂಕಪಟ್ಟಿಯಲ್ಲಿ ಖಾತೆ ತೆರೆದು ಮೊದಲ ಸ್ಥಾನದಲ್ಲಿದೆ.
ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಮುಂದಿನ ಪಂದ್ಯವು ಸೋಮವಾರ, ಆಗಸ್ಟ್ 14ರಂದು ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಆಡಲಿದ್ದರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮುಂದಿನ ಪಂದ್ಯ ಮಂಗಳವಾರ, ಆಗಸ್ಟ್ 15ರಂದು ಶಿವಮೊಗ್ಗ ಲಯನ್ಸ್ ವಿರುದ್ಧ ಸೆಣಸಾಡಲಿದೆ.