ಸೋಮವಾರ, ಆಗಸ್ಟ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡದ ಎದುರು ವಿಜಯ್ಕುಮಾರ್ ವೈಶಾಕ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಹೀನಾಯ ಸೋಲು ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ 19.3 ಓವರ್ಗಳಲ್ಲಿ 138 ರನ್ಗಳಿಗೆ ಸರ್ವಪತನ ಕಂಡಿತು. ಪ್ರತ್ಯುತ್ತರವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ 15.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸುವ ಮೂಲಕ ಇನ್ನೂ 4.4 ಓವರ್ಗಳು ಬಾಕಿ ಇರುವಂತೆಯೇ ಗುರಿ ತಲುಪಿತು.
ಗುಲ್ಬರ್ಗ ಮಿಸ್ಟಿಕ್ಸ್ ನೀಡಿದ್ದ 139 ರನ್ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಆರಂಭಿಕ ಹಾಗೂ ಆರ್ಸಿಬಿ ತಂಡದ ಆಟಗಾರ ಲುವ್ನಿತ್ ಸಿಸೋಡಿಯಾ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 61 ರನ್ ಬಾರಿಸಿದರು. ಇನ್ನು ಕೃಷ್ಣನ್ ಶ್ರೀಜಿತ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 47 ರನ್ ಗಳಿಸಿದರು.
ಉಳಿದಂತೆ ನಾಗ ಭರತ್ 10 ರನ್ ಮತ್ತು ನಾಯಕ ಮನೀಶ್ ಪಾಂಡೆ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 15 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.
ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಪರ ಬೌಲಿಂಗ್ನಲ್ಲಿ ಅಭಿಲಾಷ್ ಶೆಟ್ಟಿ 3 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರೆ, ಶರಣ್ ಗೌಡ 1 ಓವರ್ನಲ್ಲಿ 8 ರನ್ ನೀಡಿ 1 ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಆರಂಭಿಕರಾದ ಎಲ್ಆರ್ ಚೇತನ್ 10 ರನ್, ಆದರ್ಶ್ ಪ್ರಜ್ವಲ್ 14 ರನ್ ಗಳಿಸಿದರು. ನಂತರ ಬಂದ ಅನೀಶ್ ಕೆವಿ 16 ರನ್, ಸ್ಮರಣ್ ಆರ್ 15 ರನ್, ಅಮಿತ್ ವರ್ಮಾ 19 ರನ್, ಮ್ಯಾಕ್ನೆಲ್ ನೊರಾನ್ನಾ 23 ರನ್, ಸೌರ್ಭ್ ಮುಟ್ಟೂರ್ 17 ರನ್, ಅವಿನಾಶ್ ಡಿ 6 ರನ್ ಗಳಿಸಿದರು.
ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಬೌಲಿಂಗ್ನಲ್ಲಿ ಮನ್ವಂತ್ ಕುಮಾರ್ 3 ಓವರ್ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ 2 ವಿಕೆಟ್, ಲಾವಿಶ್ ಕೌಶಾಲ್ 2 ವಿಕೆಟ್ ಮತ್ತು ಮಿತ್ರಕಾಂತ್ 1 ವಿಕೆಟ್ ಪಡೆದು ಮಿಂಚಿದರು.
ಹುಬ್ಬಳ್ಳಿ ಟೈಗರ್ಸ್ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ ಲುವ್ನಿತ್ ಸಿಸೋಡಿಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಬುಧವಾರ, ಆಗಸ್ಟ್ 16ರಂದು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಆಡಲಿದ್ದರೆ, ಗುಲ್ಬರ್ಗ ಮಿಸ್ಟಿಕ್ಸ್ ತಂಡ ಅದೇ ದಿನ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ.