ಶುಕ್ರವಾರ, ಆಗಸ್ಟ್ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 26ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಗೆಲುವಿನ ಹಳಿಗೆ ಮರಳಿದರೆ, ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡ ಸತತ ಎರಡನೇ ಸೋಲು ಕಂಡಿತು.

131 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ 18.4 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 131 ರನ್ ಗಳಿಸುವ ಮೂಲಕ ಇನ್ನೂ 8 ಎಸೆತಗಳು ಮತ್ತು 3 ವಿಕೆಟ್ಗಳು ಉಳಿದಿರುವಂತೆ ರೋಚಕ ಜಯಭೇರಿ ಬಾರಿಸಿತು.
ಶಿವಮೊಗ್ಗ ಲಯನ್ಸ್ ತಂಡದ ಪರ ಆರಂಭಿಕರಾದ ರೋಹನ್ ಕದಂ 17 ರನ್ ಮತ್ತು ನಿಹಾಲ್ ಉಳ್ಳಾಲ 9 ರನ್ ಗಳಿಸಿ ಔಟಾದರು. ರೋಹಿತ್ ಕುಮಾರ್ 18 ರನ್, ನಾಯಕ ಶ್ರೇಯಸ್ ಗೋಪಾಲ್ 31 ರನ್, ಕ್ರಾಂತಿ ಕುಮಾರ್ 34 ರನ್, ಶಿವರಾಜ್ 12 ರನ್ ಗಳಿಸಿದರೆ, ಉಳಿದವರು ಎರಡಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ.
ಬೌಲಿಂಗ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಸ್ಯಾಂಟೊಕ್ ಸಿಂಗ್, ಕೆಸಿ ಕಾರಿಯಪ್ಪ, ಮನ್ವಂತ್ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಲಾವಿಶ್ ಕೌಶಲ್ ಮತ್ತು ಪ್ರವೀಣ್ ದುಬೆ ತಲಾ ಒಂದು ವಿಕೆಟ್ ಪಡೆದರು.
ಇನ್ನು ಎರಡನೇ ಇನ್ನಿಂಗ್ಸ್ನ ಬ್ಯಾಟಿಂಗ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಮೊಹಮ್ಮದ್ ತಾಹ 12 ರನ್, ಕೃಷ್ಣನ್ ಶ್ರೀಜಿತ್ 41 ಎಸೆತಗಳಲ್ಲಿ 5 ಬೌಂಡರಿ ಸಮೇತ 50 ರನ್, ಪ್ರವೀಣ್ ದುಬೆ 18 ರನ್, ಮನ್ವಂತ್ ಕುಮಾರ್ 27 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು.