ಮಹಾರಾಜ ಟ್ರೋಫಿ 2023: ಶರತ್ ಭರ್ಜರಿ ಶತಕ; ಮೈಸೂರು ವಾರಿಯರ್ಸ್ ವಿರುದ್ಧ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಗೆಲುವು
ಮಂಗಳವಾರ, ಆಗಸ್ಟ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಮಂಗಳೂರು ಡ್ರಾಗನ್ಸ್ ತಂಡವು 5 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು.
ಶರತ್ ಬಿಆರ್ ಅವರ ಭರ್ಜರಿ ಶತಕದ ನೆರವಿನಿಂದ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ತಂಡವು ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವನ್ನು ಸೋಲಿಸಿ ಅಮೂಲ್ಯ ಎರಡು ಅಂಕಗಳನ್ನು ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ಗಳನ್ನು ಕಲೆಹಾಕಿತು. ಬೃಹತ್ ಮೊತ್ತ ಬೆನ್ನಟ್ಟಿದ ಮಂಗಳೂರು ಡ್ರಾಗನ್ಸ್ ತಂಡ 18.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಮೈಸೂರು ವಾರಿಯರ್ಸ್ ತಂಡದ ಪರ ಆರಂಭಿಕರಾದರ ಆರ್ ಸಮರ್ಥ್ 14 ರನ್ ಮತ್ತು ಕಾರ್ತಿಕ್ ಸಿಎ 29 ರನ್ ಗಳಿಸಿ ಔಟಾದರು. ಬಳಿಕ ಬಂದ ನಾಯಕ ಕರುಣ್ ನಾಯರ್ 39 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 77 ನ್ ಬಾರಿಸಿದರು.

ನಂತರ ರಾಹುಲ್ ರಾವತ್ 24 ರನ್, ತುಷಾರ್ ಸಿಂಗ್ 20 ರನ್, ಮನೋಜ್ ಭಾಂಡಗೆ ಬಿರುಸಿನ 26 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಮಂಗಳೂರು ಡ್ರಾಗನ್ಸ್ ತಂಡದ ಪರ ಬೌಲಿಂಗ್ನಲ್ಲಿ ಆದಿತ್ಯ ಗೋಯಲ್, ಪ್ರತೀಕ್ ಜೈನ್, ನವೀನ್ ಎಂಜಿ, ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.
202 ರನ್ಗಳ ಬೃಹತ್ ಮೊತ್ತದ ಚೇಸಿಂಗ್ ಮಾಡಿದ ಮಂಗಳೂರು ಡ್ರಾಗನ್ಸ್ ತಂಡದ ಆರಂಭಿಕ ನವೀನ್ ಎಂಜಿ ಅವರು 6 ರನ್ ಗಳಿಸಿದ್ದಾಗ ಔಟಾದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ರೋಹನ್ ಪಾಟೀಲ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 54 ರನ್ ಬಾರಿಸಿದರು.
ಇನ್ನು ಶರತ್ ಬಿಆರ್ 61 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಅಜೇಯ 111 ರನ್ಗಳ ಭರ್ಜರಿ ಶತಕ ಬಾರಿಸಿದರು. ಉಳಿದಂತೆ ಅನೀಶ್ವರ್ ಗೌತಮ್ 6 ರನ್, ಸಿದ್ಧಾರ್ಥ್ 14 ರನ್, ಅನಿರುದ್ಧ್ ಜೋಷಿ 2 ರನ್ ಮತ್ತು ನಾಯಕ ಕೆ ಗೌತಮ್ 5 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣಾ ನಾಯರ್ ತಮ್ಮ ಸ್ಫೋಟಕ ಅರ್ಧಶತಕಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಮೈಸೂರು ವಾರಿಯರ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬುಧವಾರ, ಆಗಸ್ಟ್ 16ರಂದು ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು ಎದುರಿಸಲಿದ್ದರೆ, ಮಂಗಳೂರು ಡ್ರಾಗನ್ಸ್ ತಂಡವು ಗುರುವಾರ, ಆಗಸ್ಟ್ 17ರಂದು ಹುಬ್ಬಳ್ಳಿ ಟೈಗರ್ಸ್ ತಂಡದ ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications