ಭಾನುವಾರ, ಆಗಸ್ಟ್ 20ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡವು 6 ವಿಕೆಟ್ಗಳ ನಿರಾಯಾಸದ ಗೆಲುವು ಸಾಧಿಸಿತು.
ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡದ ಸತತ ಗೆಲುವಿನ ಓಟಕ್ಕೆ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಬ್ರೇಕ್ ಹಾಕಿದೆ.

ಹುಬ್ಬಳ್ಳಿ ಟೈಗರ್ಸ್ ನೀಡಿದ್ದ 186 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ ಆರ್ ಸಮರ್ಥ್ ಅವರ ಅಮೋಘ ಅರ್ಧಶತಕ ಸಹಾಯದಿಂದ 18.5 ಓವರ್ಗಳಲ್ಲಿ 4 ವಿಕೆಟ್ಗೆ 188 ರನ್ ಗಳಿಸಿ ಭರ್ಜರಿ 6 ವಿಕೆಟ್ಗಳ ಜಯ ಸಾಧಿಸಿತು.
ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭಿಕರಾದ ಲುವ್ನಿತ್ ಸಿಸೋಡಿಯಾ 62 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿ ಹಿಟ್ ವಿಕೆಟ್ ರೂಪದಲ್ಲಿ ಔಟಾದರು. ಇದಕ್ಕೂ ಮುನ್ನ ಮೊಹಮ್ಮದ್ ತಾಹ ಕೇವಲ 6 ರನ್ ಗಳಿಸಿದರು.

ನಂತರ ಬಂದ ನಾಗ ಭರತ್ 12 ರನ್, ನಾಯಕ ಮನೀಶ್ ಪಾಂಡೆ 21 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 33 ರನ್ ಗಳಿಸಿದರೆ, ಪ್ರವೀಣ್ ದುಬೆ 16 ರನ್, ಮನ್ವಂತ್ ಕುಮಾರ್ 6 ರನ್ ಮತ್ತು ಎಂಬಿ ದರ್ಶನ್ 4 ರನ್ ಗಳಿಸಿದರು.
ಮೈಸೂರು ವಾರಿಯರ್ಸ್ ಪರ ಬೌಲಿಂಗ್ನಲ್ಲಿ ಕಾರ್ತಿಕ್ ಸಿಎ 4 ಓವರ್ಗಳಲ್ಲಿ 50 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಶಶಿಕುಮಾರ್ ಮತ್ತು ಮನೋಜ್ ಭಾಂಡಗೆ ತಲಾ ಒಂದೊಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ನಲ್ಲಿ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಪರ ರವಿಕುಮಾರ್ ಸಮರ್ಥ್ 42 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿದರೆ, ಕಾರ್ತಿಕ್ ಸಿಎ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 29 ರನ್ ಗಳಿಸಿದರು.
ಇನ್ನು ನಾಯಕ ಕರುಣ್ ನಾಯರ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 41 ರನ್ ಕಲೆಹಾಕಿದರು. ಎಸ್ ಮನಗೇರ್ ಅಜೇಯ 21 ರನ್ ಮತ್ತು ಶಿವಕುಮಾರ್ ರಕ್ಷಿತ್ ಅಜೇಯ 22 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಹುಬ್ಬಳ್ಳಿ ಟೈಗರ್ಸ್ ಪರ ಬೌಲಿಂಗ್ನಲ್ಲಿ ಪ್ರವೀಣ್ ದುಬೆ ವಿಕೆಟ್ ಪಡೆದ ಏಕೈಕ ಬೌಲರ್ ಆದರು. 4 ಓವರ್ಗಳಲ್ಲಿ 38 ರನ್ ನೀಡಿ 3 ವಿಕೆಟ್ ಕಬಳಿಸಿದರು. ಮೈಸೂರು ವಾರಿಯರ್ಸ್ ತಂಡದ ರವಿಕುಮಾರ್ ಸಮರ್ಥ್ ತಮ್ಮ ಅಮೂಲ್ಯ ಅರ್ಧಶತಕಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡ ತಮ್ಮ ಮುಂದಿನ ಪಂದ್ಯದಲ್ಲಿ ಮಂಗಳವಾರ, ಆಗಸ್ಟ್ 22ರಂದು ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದ್ದರೆ. ಅದೇ ದಿನ ಮೈಸೂರು ವಾರಿಯರ್ಸ್ ತಂಡವು ಶಿವಮೊಗ್ಗ ಲಯನ್ಸ್ ತಂಡದ ವಿರುದ್ಧ ಸೆಣಸಾಡಲಿದೆ.