ಬುಧವಾರ, ಆಗಸ್ಟ್ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡವು 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು.
ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಗೆಲುವಿನ ಹಳಿಗೆ ಮರಳಿದರೆ, ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಿದ್ದ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ಸೋಲಿನ ಕಡೆ ಮುಖ ಮಾಡಿತು.

141 ರನ್ಗಳ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ ಲಂಕೇಶ್ ಕೆಎಸ್ ಅವರ ಭರ್ಜರಿ ಅರ್ಧಶತಕದ ಸಹಾಯದಿಂದ 16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 141 ರನ್ ಗಳಿಸುವ ಮೂಲಕ ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗಳ ಅಭೂತಪೂರ್ವ ಗೆಲುವು ದಾಖಲಿಸಿತು.
ಮಂಗಳೂರು ಡ್ರಾಗನ್ಸ್ ತಂಡದ ಪರ ಬ್ಯಾಟಿಂಗ್ನಲ್ಲಿ ಆರಂಭಿಕರಾದ ಸಿದ್ಧಾರ್ಥ್ ಯಾವುದೇ ರನ್ ಗಳಿಸಲು ವಿಫಲರಾದರೆ, ರೋಹನ್ ಪಾಟೀಲ್ 42 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿದರು. ನಂತರ ಬಂದ ಶರತ್ ಬಿಆರ್ 11 ರನ್ ಗಳಿಸಿ ಔಟಾದರು.
ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಾಯಕ ಕೃಷ್ಣಪ್ಪ ಗೌತಮ್ 15 ರನ್, ಗೌರವ್ ಧಿಮನ್ 5 ರನ್, ಅನಿರುದ್ಧ್ ಜೋಶಿ 13 ರನ್, ನವೀನ್ ಎಂಜಿ 11 ರನ್ ಮತ್ತು ಆದಿತ್ಯ ಗೋಯಲ್ 6 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಮೋನಿಶ್ ರೆಡ್ಡಿ 4 ಓವರ್ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರೆ, ಜೆ ಸುಚಿತ್ 4 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಗೌತಮ್ ಮಿಶ್ರಾ, ಶ್ರೀಶ ಅಚಾರ್ ಮತ್ತು ಮನೋಜ್ ಭಾಂಡಗೆ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಮೈಸೂರು ವಾರಿಯರ್ಸ್ ತಂಡದ ಆರಂಭಿಕರಾದ ಸಮರ್ಥ್ 6 ರನ್ ಮತ್ತು ಭರತ್ ಧುರಿ 10 ರನ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ನಂತರ ಬಂದ ನಾಯಕ ಕರುಣ್ ನಾಯರ್ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 43 ರನ್ ಗಳಿಸಿದರು.
ಇನ್ನು ಲಂಕೇಶ್ ಕೆಎಸ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಮೂಲಕ ಅಜೇಯ 63 ರನ್ ಬಾರಿಸಿದರೆ, ಎಸ್ ಮನಗೇರ್ ಅಜೇಯ 11 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.