ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿಗೆ ನಲುಗಿದ ಮೈಸೂರು; ಫೈನಲ್ ಪ್ರವೇಶಿಸಿದ ಗುಲ್ಬರ್ಗಾ

ಆಗಸ್ಟ್ 7ರಂದು ಆರಂಭವಾಗಿದ್ದ ಮಹಾರಾಜ ಟ್ರೋಫಿ ಟಿ ಟ್ವೆಂಟಿ ಲೀಗ್ ಟೂರ್ನಿ ಸದ್ಯ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ನಾಳೆ ( ಆಗಸ್ಟ್ 27 ) ಫೈನಲ್ ಪಂದ್ಯ ನಡೆಯಲಿದ್ದು ಟ್ರೋಫಿಯಲ್ಲಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬ ಕುತೂಹಲ ಮೂಡಿದೆ. ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಸೋಲಿಸಿದ್ದ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್ ಪಂದ್ಯಕ್ಕೆ ನೇರವಾಗಿ ಪ್ರವೇಶವನ್ನು ಪಡೆದುಕೊಂಡಿತ್ತು. ಅತ್ತ ಸೋತ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯ ಗೆದ್ದು ಬಂದಿದ್ದ ಮೈಸೂರು ವಾರಿಯರ್ಸ್ ವಿರುದ್ಧ ನಿನ್ನೆ ( ಆಗಸ್ಟ್ 25 ) ಫೈನಲ್ ಪಂದ್ಯದ ಪ್ರವೇಶಕ್ಕಾಗಿ ಸೆಣಸಾಟವನ್ನು ನಡೆಸಿತು.
ಈ ಮಹತ್ವದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ರೋಚಕ ಜಯವನ್ನು ಸಾಧಿಸಿದ್ದು, ಇದೀಗ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮೈಸೂರು ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಹಾಗೂ ಪವನ್ ದೇಶಪಾಂಡೆ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ 158 ರನ್ಗಳ ಗುರಿಯನ್ನು ನೀಡಿತು. ಇತ್ತ ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ದೇವದತ್ ಪಡಿಕ್ಕಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿ 6 ವಿಕೆಟ್ಗಳ ರೋಚಕ ಜಯವನ್ನು ಕಂಡು ಫೈನಲ್ ಸುತ್ತಿಗೆ ಪ್ರವೇಶ ಪಡೆದುಕೊಂಡಿತು.

ಮೈಸೂರು ವಾರಿಯರ್ಸ್ ಇನ್ನಿಂಗ್ಸ್
ಮೈಸೂರು ವಾರಿಯರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಿಹಾಲ್ ಉಳ್ಳಾಲ್ 14 ರನ್ ಕಲೆಹಾಕಿದರೆ, ನಾಯಕ ಕರುಣ್ ನಾಯರ್ 42 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪವನ್ ದೇಶಪಾಂಡೆ 38 ರನ್, ಶ್ರೇಯಸ್ ಗೋಪಾಲ್ 10 ರನ್, ಶಿವರಾಜ್ ಎಸ್ 16 ರನ್, ನಾಗ ಭರತ್ ಅಜೇಯ 27 ರನ್ ಮತ್ತು ಭರತ್ ಧೂರಿ ಅಜೇಯ 3 ರನ್ ಬಾರಿಸಿದರು.
ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಪರ ವಿದ್ವತ್ ಕಾವೇರಪ್ಪ ಹಾಗೂ ಕುಶಾಲ್ ವಧ್ವಾನಿ ತಲಾ 2 ವಿಕೆಟ್ ಪಡೆದರೆ, ಪ್ರಣವ್ ಭಾಟಿಯಾ 1 ವಿಕೆಟ್ ಪಡೆದರು.

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್
ಮೈಸೂರು ವಾರಿಯರ್ಸ್ ನೀಡಿದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರರಾಗಿ ಜಸ್ವಂತ್ ಆಚಾರ್ಯ ಹಾಗೂ ರೋಹನ್ ಪಾಟೀಲ್ ಕಣಕ್ಕಿಳಿದರು. ಈ ಇಬ್ಬರೂ ಸಹ ಉತ್ತಮ ಆರಂಭ ಕಟ್ಟಿ ಕೊಡುವಲ್ಲಿ ವಿಫಲರಾದರು. ಜಸ್ವಂತ್ ಆಚಾರ್ಯ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ರೋಹನ್ ಪಾಟೀಲ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗುಲ್ಬರ್ಗಾ ಮಿಸ್ಟಿಕ್ಸ್ 4 ಎಸೆತಗಳಲ್ಲಿ 4 ರನ್ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 64 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ ಅಜೇಯ 96 ರನ್ ಚಚ್ಚಿ ಮ್ಯಾಚ್ ವಿನ್ನರ್ ಆಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ ಕೃಷ್ಣನ್ ಶ್ರೀಜಿತ್ 9, ನಾಯಕ ಮನೀಷ್ ಪಾಂಡೆ 10 ಹಾಗೂ ಮನೋಜ್ ಭಂಡಾಗೆ 23 ಎಸೆತಗಳಲ್ಲಿ ಅಜೇಯ 35 ರನ್ ಕಲೆ ಹಾಕಿದರು.
ಮೈಸೂರು ವಾರಿಯರ್ಸ್ ಪರ ಪವನ್ ದೇಶಪಾಂಡೆ 2 ವಿಕೆಟ್ ಪಡೆದರೆ, ವಿದ್ಯಾಧರ್ ಪಾಟೀಲ್ ಮತ್ತು ಮೋನಿಶ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.

ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಜತೆ ಗುಲ್ಬರ್ಗ ಮಿಸ್ಟಿಕ್ಸ್ ಕಾದಾಟ
ಸದ್ಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಜಯ ಸಾಧಿಸಿರುವ ಗುಲ್ಬರ್ಗ ಮಿಸ್ಟಿಕ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಆಗಸ್ಟ್26ರ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications