ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟಿ ಟ್ವೆಂಟಿ ಲೀಗ್ನ ಹದಿನಾಲ್ಕನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ 6 ರನ್ಗಳ ಗೆಲುವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಮೈಸೂರು ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ಪವನ್ ದೇಶಪಾಂಡೆ ಅರ್ಧಶತಕ, ಶುಭಾಂಗ್ ಹಾಗೂ ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 172 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಟೇಬಲ್ ಟಾಪರ್ಸ್ ಬೆಂಗಳೂರು ಬ್ಲಾಸ್ಟರ್ಸ್ 20 ಒವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಈ ಮೂಲಕ ಮೈಸೂರು ವಾರಿಯರ್ಸ್ 6 ರನ್ಗಳಿಂದ ಗೆದ್ದು ಬೆಂಗಳೂರು ಬ್ಲಾಸ್ಟರ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
ಬೆಂಗಳೂರು ಬ್ಲಾಸ್ಟರ್ಸ್ ಪರ ಅನೀಶ್ ಕೆವಿ ಹಾಗೂ ಶಿವಕುಮಾರ್ ರಕ್ಷಿತ್ ಉತ್ತಮ ಆಟವನ್ನಾಡಿದರೂ ಸಹ ತಂಡ ಬೇಗನೆ ವಿಕೆಟ್ ಕಳೆದುಕೊಂಡ ನಂತರ ಸೋಲನ್ನು ಅನುಭವಿಸಿದೆ.

ಮೈಸೂರು ವಾರಿಯರ್ಸ್ ಇನ್ನಿಂಗ್ಸ್
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಿಹಾಲ್ ಉಲ್ಲಾಳ್ 23 ರನ್ ಕಲೆಹಾಕಿದರೆ, ನಾಯಕ ಕರುಣ್ ನಾಯರ್ 1 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪವನ್ ದೇಶಪಾಂಡೆ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 36 ಎಸೆತಗಳಲ್ಲಿ 55 ರನ್ ಕಲೆಹಾಕಿದರು, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜೇಯರಾಗಿ ಉಳಿದ ಶುಭಾಂಗ್ ಹೆಗ್ಡೆ 33 ರನ್ ಬಾರಿಸಿದರೆ, ಶ್ರೇಯಸ್ ಗೋಪಾಲ್ 27 ರನ್, ಶಿವರಾಜ್ ಎಸ್ 13 ರನ್, ಲೋಚನ್ ಅಪ್ಪಣ್ಣ 10 ರನ್ ಹಾಗೂ 3 ರನ್ ಕಲೆಹಾಕಿದ ಜಿ ಎಸ್ ಚಿರಂಜೀವಿ ಅಜೇಯರಾಗಿ ಉಳಿದರು.
ಬೆಂಗಳೂರು ಬ್ಲಾಸ್ಟರ್ಸ್ ಪರ ಪ್ರದೀಪ್ ಟಿ 2 ವಿಕೆಟ್, ರೋನಿತ್ ಮೋರೆ, ಕುಮಾರ್ ಎಲ್ ಆರ್ ಮತ್ತು ರಿಷಿ ಬೋಪಣ್ಣ ತಲಾ ಒಂದೊಂದು ವಿಕೆಟ್ ಪಡೆದರು.

ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್
ಇನ್ನು ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಎಲ್ ಆರ್ ಚೇತನ್ 4 ರನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ 8 ರನ್ ಗಳಿಸಿ ಔಟ್ ಆದರು. ಹೀಗೆ ಬೆಂಗಳೂರು ಬ್ಲಾಸ್ಟರ್ಸ್ ತನ್ನ ತಂಡದ ಬಲಿಷ್ಠ ಆರಂಭಿಕ ಆಟಗಾರರಿಬ್ಬರ ವಿಕೆಟ್ಗಳನ್ನು ಬೇಗನೇ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಕಣಕ್ಕಿಳಿದ ಅನೀಶ್ ಕೆವಿ 48 ರನ್ ಹಾಗೂ ಶಿವಕುಮಾರ್ ರಕ್ಷಿತ್ 34 ರನ್ ಗಳಿಸಿ ಆರಂಭಿಕ ಕುಸಿತ ಕಂಡು ಆಸರೆಯಾದರೂ ಸಹ ತಂಡಕ್ಕೆ ಗೆಲುವು ತಂದುಕೊಡುವಂತಹ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಂತರ ಕಣಕ್ಕಿಳಿದ ಅನಿರುದ್ಧ ಜೋಷಿ 29 ರನ್ ಗಳಿಸಿದರೆ, ಕ್ರಾಂತಿ ಕುಮಾರ್ 5 ರನ್, ರಿಷಿ ಬೋಪಣ್ಣ 5 ರನ್ ಕಲೆಹಾಕಿದರು. ಅಂತಿಮವಾಗಿ ಕುಮಾರ್ ಎಲ್ ಆರ್ ಅಜೇಯ 9 ಮತ್ತು ಪ್ರದೀಪ್ ಟಿ ಅಜೇಯ 11 ರನ್ ಕಲೆಹಾಕಿದರು.
ಮೈಸೂರು ವಾರಿಯರ್ಸ್ ಪರ ಆದಿತ್ಯ ಗೋಪಾಲ್ 3 ವಿಕೆಟ್, ವಿದ್ಯಾಧರ್ ಪಾಟೀಲ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಹಾಗೂ ಶುಭಾಂಗ್ ಹೆಗ್ಡೆ ಒಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಮೈಸೂರು ವಾರಿಯರ್ಸ್: ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ, ಶಿವರಾಜ್ ಎಸ್, ಶುಭಾಂಗ್ ಹೆಗ್ಡೆ, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್, ಆದಿತ್ಯ ಗೋಯಲ್, ಲೋಚನ್ ಅಪ್ಪಣ್ಣ, ಜಿಎಸ್ ಚಿರಂಜೀವಿ, ಮೋನಿಶ್ ರೆಡ್ಡಿ
ಬೆಂಗಳೂರು ಬ್ಲಾಸ್ಟರ್ಸ್: ಎಲ್ ಆರ್ ಚೇತನ್, ಮಯಾಂಕ್ ಅಗರ್ವಾಲ್ (ನಾಯಕ), ಅನೀಶ್ ಕೆವಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ಕುಮಾರ್ ಎಲ್ ಆರ್, ಪ್ರದೀಪ್ ಟಿ, ರೋನಿತ್ ಮೋರ್, ಅನಿರುದ್ಧ ಜೋಶಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications