
ನವದೆಹಲಿ: ವೃತ್ತಿಪರ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೆಂದು ಭಾರತದ ಕ್ರಿಕೆಟ್ ದಂತಕತೆ, 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. ಕ್ರಿಕೆಟ್ ಅಧಿಕಾರಿಗಳು ಕ್ರಿಕೆಟನ್ನು ಇನ್ನಷ್ಟು ಸುರಕ್ಷಿತಗೊಳಿಸುವಲ್ಲಿ ಈ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ತಾನು ಆಡುತ್ತಿದ್ದ ದಿನಗಳಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಲ್ಮೆಟ್ ಇಲ್ಲದೆ ಆಡಿದ್ದೆ ಕಡಿಮೆ. ಅಕ್ಟೋಬರ್ 24ರಂದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ 11 ಪಂಜಾಬ್ ಮುಖಾಮುಖಿಯ ವೇಳೆಯ ಘಟನೆಯೊಂದನ್ನು ಗಮನಿಸಿದ ಬಳಿಕ ಸಚಿನ್ ಈ ಸಲಹೆ ನೀಡಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಅಂದಿನ ಪಂದ್ಯದಲ್ಲಿ ಎಸ್ಆರ್ಎಚ್ ಬ್ಯಾಟ್ಸ್ಮನ್ ವಿಜಯ್ ಶಂಕರ್ ರನ್ ಓಡುವಾಗ, ಪಂಜಾಬ್ ಆಟಗಾರ ನಿಕೋಲಸ್ ಪೂರನ್ ಎಸೆದಿದ್ದ ಚೆಂಡು ಶಂಕರ್ಗೆ ಬಡಿದಿತ್ತು. ಆದರೆ ಶಂಕರ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅನಾಹುತವೇನೂ ಆಗಿರಲಿಲ್ಲ. ಆದರೆ ಈ ಘಟನೆ ಮುಂದಿಟ್ಟುಕೊಂಡು ಸಚಿನ್ ಟ್ವೀಟ್ ಮಾಡಿದ್ದಾರೆ.
ಪಂಜಾಬ್-ಹೈದರಾಬಾದ್ ಪಂದ್ಯದಲ್ಲಿ ವಿಜಯ್ಗೆ ಚೆಂಡು ಬಡಿಯುತ್ತಿರುವ ಚಿತ್ರ ಹಾಕಿರುವ ಸಚಿನ್, 'ಟಿ20 ಕ್ರಿಕೆಟ್ ವೇಗದ ಆಟವಾಗುತ್ತಿದೆ, ಆದರೆ ಸುರಕ್ಷಿತ ಆಟವಾತ್ತಿದೆಯಾ? ಇತ್ತೀಚೆಗೆ ನಾನು ಕೆಟ್ಟದಾಗಿ ಪರಿಣಮಿಸಬಲ್ಲ ಘಟನೆಯೊಂದನ್ನು ನೋಡಿದೆ. ಅದು ವೇಗಿ ಆಗಿರಲಿ, ಸ್ಪಿನ್ನರ್ ಆಗಿರಲಿ. ವೃತ್ತಿಪರ ಕ್ರಿಕೆಟ್ಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕು,' ಎಂದು ಬರೆದುಕೊಂಡಿದ್ದಾರೆ.