ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಡಾ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಭಾರತದ ಪ್ರಧಾನಿಯಾಗಿದ್ದರು. 1991 ರ ಆರ್ಥಿಕ ಸುಧಾರಣೆಗಳನ್ನು ಮುನ್ನಡೆಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಮನಮೋಹನ್ ಸಿಂಗ್ ಅವರು ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಭಾರತಕ್ಕೆ ಸಹಾಯ ಮಾಡಿದ್ದರು.
ಮನಮೋಹನ್ ಸಿಂಗ್ ಅವರ ನೀತಿಗಳು ಆರ್ಥಿಕ ಉದಾರೀಕರಣವನ್ನು ಪ್ರಾರಂಭಿಸಿದವು. ನಂತರ ಈ ನೀತಿಗಳು ಭಾರತದ ತ್ವರಿತ ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕಿತು. ಮನಮೋಹನ್ ಸಿಂಗ್ ಅವರನ್ನು ಗುರುವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9.51ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಮನಮೋಹನ ಸಿಂಗ್ ಕೇವಲ ಆರ್ಥಿಕತೆಗೆ ಮಾತ್ರ ಒತ್ತು ನೀಡದೆ, ಕ್ರಿಕೆಟ್ ಕ್ರೀಡೆ ಮೇಲೂ ಅಪಾರ ಆಸಕ್ತಿ ಹೊಂದಿದ್ದರು. ಇದಕ್ಕೆ 2011ರ ಏಕದಿನ ವಿಶ್ವಕಪ್ ಟೂರ್ನಿಯೇ ಸಾಕ್ಷಿಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಮುಂಬೈ ಮೇಲೆ 2008ರಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಹದಗೆಡಲು ಆರಂಭಿಸಿತ್ತು. ಪಾಕಿಸ್ತಾನ ಕ್ರಿಕೆಟಿಗರಿಗೆ ಐಪಿಎಲ್ ಆಡದಂತೆ ನಿಷೇಧ ಹೇರಲಾಗಿತ್ತು. ಇದರ ಹೊರತಾಗಿ ಭಾರತೀಯ ಕ್ರಿಕೆಟಿಗರು ಮತ್ತೆ ಪಾಕಿಸ್ತಾನದಲ್ಲಿ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಲಿಲ್ಲ. ಆದಾಗ್ಯೂ, 2011ರ ಏಕದಿನ ವಿಶ್ವಕಪ್ ಸಮಯದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕ್ರಿಕೆಟ್ ರಾಜತಾಂತ್ರಿಕತೆಯು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜಂಟಿಯಾಗಿ 2011ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿದ್ದವು. ಮೊಹಾಲಿಯಲ್ಲಿ ನಡೆದ 2011ರ ವಿಶ್ವಕಪ್ನ ಸೆಮಿಫೈನಲ್ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು.
2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಅಂದಿನ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಒಟ್ಟಿಗೆ ಕುಳಿತು ವೀಕ್ಷಿಸಿದ್ದರು. ಮನಮೋಹನ್ ಸಿಂಗ್ ಅವರ ಈ ಕ್ರಿಕೆಟ್ ರಾಜತಾಂತ್ರಿಕತೆ ಇಂದಿಗೂ ಚರ್ಚೆಯಾಗುತ್ತಿದೆ. 30 ಮಾರ್ಚ್ 2011 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮನಮೋಹನ್ ಸಿಂಗ್ ಮತ್ತು ಯೂಸುಫ್ ರಜಾ ಗಿಲಾನಿ ಉಭಯ ತಂಡಗಳ ಆಟಗಾರರನ್ನು ಮಾತನಾಡಿಸಿದ್ದರು. ಈ ಅಭೂತಪೂರ್ವ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಮನಮೋಹನ್ ಸಿಂಗ್ ಅವರ ಪಂದ್ಯ ವೀಕ್ಷಣೆಯ ಆಹ್ವಾನವನ್ನು ಯೂಸುಫ್ ರಜಾ ಗಿಲಾನಿ ಸ್ವೀಕರಿಸಿ ಭಾರತಕ್ಕೆ ಆಗಮಿಸಿದ್ದರು. ಬಳಿಕ ಇಬ್ಬರು ನಾಯಕರು ಒಟ್ಟಿಗೆ ಕುಳಿತು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪ್ರತಿಷ್ಠಿತ ಸೆಮಿ-ಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು. ಈ ಪಂದ್ಯವನ್ನು ಭಾರತ 29 ರನ್ಗಳಿಂದ ಗೆದ್ದುಕೊಂಡಿತು.
ಮೊಹಾಲಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ ಕೇವಲ 231 ರನ್ಗಳಿಗೆ ಆಲೌಟಾಯಿತು. ಈ ಪಂದ್ಯದಲ್ಲೂ ಸಚಿನ್ ತೆಂಡೂಲ್ಕರ್ ಅದ್ಭುತ ಬ್ಯಾಟಿಂಗ್ ಮಾಡಿ 85 ರನ್ ಗಳಿಸಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದಿದ್ದರು.