
ಸಿಡ್ನಿ: ಕನ್ಕಶನ್ ನಿಯಮವನ್ನು ದುರ್ಬಳಕೆ ಮಾಡದಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಎಚ್ಚರಿಸಿದ್ದಾರೆ. ಆ ನಿಯಮ ಆಟಗಾರರ ರಕ್ಷಣೆಗಿದೆ. ಹೀಗಾಗಿ ಅದನ್ನು ಮಿಸ್ ಯೂಸ್ ಮಾಡಿಕೊಳ್ಳಬೇಡಿ. ನ್ಯಾಯವಾಗಿ ಮತ್ತು ಜವಾಬ್ದಾರಿಯುತವಾಗಿ ಆ ನಿಯಮವನ್ನು ಬಳಸಿಕೊಳ್ಳಿ ಎಂದು ಟೇಲರ್ ಸಲಹೆ ನೀಡಿದ್ದಾರೆ.
ಕ್ಯಾನ್ಬೆರಾದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಮೊದಲನೇ ಟಿ20ಐ ಪಂದ್ಯದ ವೇಳೆ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಹೆಲ್ಮೆಟ್ಗೆ ಚೆಂಡು ಬಡಿದು ಗಾಯವಾಗಿತ್ತು. ಅವರ ಬದಲಿಗೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಕನ್ಕಶನ್ ಸಬ್ಸ್ಟಿಟ್ಯೂಟ್ ಆಗಿ ಬಂದಿದ್ದರು. ಆ ಪಂದ್ಯದಲ್ಲಿ ಚಾಹಲ್ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಅದಾಗಿ ಕನ್ಕಶನ್ ಸಬ್ ನಿಯಮ ಚರ್ಚೆಗೀಡಾಗಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜೊತೆ ಮಾತನಾಡಿದ ಮಾರ್ಕ್ ಟೇಲರ್, 'ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮ ಇರೋದು ಆಟಗಾರರ ರಕ್ಷಣೆಗಾಗಿ. ಅದನ್ನು ಸರಿಯಾಗಿ ಬಳಸಿಕೊಳ್ಳಿ,' ಎಂದಿದ್ದಾರೆ. ಟೇಲರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕಮಿಟಿಯ ಮಾಜಿ ಸದಸ್ಯರೂ ಹೌದು.
'ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮ ನೀವು ದುರ್ಬಳಕೆ ಮಾಡಿದರೆ ರನ್ನರ್ಸ್ ನಿಯಮದಂತೆ ಅದನ್ನೂ ತೆಗೆದು ಹಾಕುವ ಸಾಧ್ಯತೆಯಿರುತ್ತದೆ. ರನ್ನರ್ಸ್ ನಿಯಮವೂ ದುರ್ಬಳಕೆಯಾಗಿದ್ದರಿಂದ ಅದನ್ನು ತೆಗೆದು ಹಾಕಲಾಯ್ತು. ಹೀಗಾಗಿ ನಿಜಕ್ಕೂ ಬದಲಿ ಆಟಗಾರನ ಅಗತ್ಯವಿದ್ದಾಗ ಆ ನಿಯಮವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಿ. ನಾನು ಮೊನ್ನೆಯ ಪಂದ್ಯವನ್ನುದ್ದೇಶಿಸಿ ಹೇಳುತ್ತಿಲ್ಲ,' ಎಂದು ಟೇಲರ್ ಹೇಳಿದ್ದಾರೆ.