
ಮುಂಬೈ, ಆಗಸ್ಟ್ 9: ಮುಂಬೈ ಕ್ರಿಕೆಟ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಮಿಂಚಿ ಬೆಳೆದ ಇತಿಹಾಸ ಹೆಚ್ಚಿನವರಿಗೆ ಗೊತ್ತಿದೆ. ಸಣ್ಣ ವಯಸ್ಸಿನಲ್ಲಿ ಮುಂಬೈ ತ೦ಡಕ್ಕೆ ಕಾಲಿರಿಸಿದ್ದ ಸಚಿನ್ ಅಲ್ಲಿಂದ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದರು. ಅಂದು ಸಚಿನ್ ಅವರನ್ನು ಮುಂಬೈ ತಂಡಕ್ಕೆ ಆರಿಸಿದ್ದ ಅದೇ ವ್ಯಕ್ತಿ ಇತ್ತೀಚೆಗೆ ಮುಂಬೈ ತಂಡಕ್ಕೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಆರಿಸಿದ್ದರು ಅನ್ನೋದು ವಿಶೇಷ.
ಸಣ್ಣ ಪ್ರಾಯದಲ್ಲಿ ತೆಂಡೂಲ್ಕರ್ ಶಾಲೆ ಮತ್ತು ಗ್ರೂಪ್ ಕ್ರಿಕೆಟ್ಗಳಲ್ಲಿ ಮುಂಚಿದ್ದರು. ಆದರೆ ತೆಂಡೂಲ್ಕರ್ ಹೆಚ್ಚು ಜನಪ್ರಿಯಗೊಂಡಿದ್ದು 1988ರ ಡಿಸೆಂಬರ್ನಲ್ಲಿ ಮುಂಬೈ (ಆಗಿನ ಬಾಂಬೆ) ಪರ ಗುಜರಾತ್ ವಿರುದ್ಧ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಪಂದ್ಯದಲ್ಲಿ. ಅಂದು ಸಚಿನ್ ಶತಕ ಬಾರಿಸಿ ಗಮನ ಸೆಳೆದಿದ್ದರಲ್ಲದೆ ಆ ಒಂದು ವರ್ಷದೊಳಗೆ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದರು.
ಸಚಿನ್ ಅವರಿಗೆ ಮುಂಬೈ ಕ್ಯಾಪ್ ನೀಡುವ ಗಟ್ಟಿ ನಿರ್ಧಾರ ಅಂದು ತೆಗೆದುಕೊಂಡಿದ್ದು ಆಗ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ನರೇನ್ ತಮ್ಹಾನೆ ಅವರಿದ್ದ ತಂಡ. ಆ ಆಯ್ಕೆ ಸಮಿತಿಯಲ್ಲಿ ಮುಂಬೈ ರಣಜಿ ತಂಡದ ಮಾಜಿ ನಾಯಕ ಮಿಲಿಂಗ್ ರೆಗೆ ಅವರೂ ಇದ್ದರು.
ಸದ್ಯ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಅದೇ ರೆಗೆ, ವಿಝ್ಝಿ ಕ್ರಿಕೆಟ್ ಟೂರ್ನಿಗಾಗಿ ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಆರಿಸಿದ್ದಾರೆ. ಮುಂಬೈ ತಂಡಕ್ಕೆ ಸಚಿನ್ ಆರಿಸಲು ಕಾರಣರಾಗಿದ್ದ ಅದೇ ವ್ಯಕ್ತಿ ಇಂದು ಅಂದರೆ ಸುಮಾರು 30 ವರ್ಷಗಳ ಬಳಿಕ ಸಚಿನ್ ಪುತ್ರ ಅರ್ಜುನ್ ಅವರನ್ನು ಆರಿಸಿದ್ದಾರೆ.
ಅಂಡರ್-23ರ ಯುವಕರಿಗಾಗಿ ಬಿಸಿಸಿಐ ಆಯೋಜಿಸುವ ವಿಝ್ಝಿ ಟ್ರೋಫಿಗಾಗಿ ಮುಂಬೈಯ 15 ಜನರ ತಂಡದಲ್ಲಿ ಪ್ರತಿಭಾನ್ವಿತ ಎಡಗೈ ವೇಗಿ, ಅರ್ಜುನ್ ತೆಂಡೂಲ್ಕರ್ ಕೂಡ ಇದ್ದಾರೆ. ಟೂರ್ನಿಯು ಆಂಧ್ರ ಪ್ರದೇಶದಲ್ಲಿ ಆಗಸ್ಟ್ 22ರಿಂದ ಆರಂಭಗೊಳ್ಳಲಿದೆ. ಮುಂಬೈ ತಂಡವನ್ನು ಹಾರ್ದಿಕ್ ತಾಮೋರ್ ಮುನ್ನಡೆಸುತ್ತಿದ್ದಾರೆ.