ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹೊಸ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಕಳಪೆ ಹೋರಾಟವನ್ನು ಮುಂದುವರೆಸಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024ರಲ್ಲಿ ಈವರೆಗೆ ಆಡಿದ ಆರು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಕಂಡಿದೆ ಮತ್ತು ನಾಲ್ಕು ಸೋಲುಗಳನ್ನು ಅನುಭವಿಸಿದೆ.
ಇತ್ತೀಚಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತು. ಅದು ಕೂಡ ತಮ್ಮ ತವರು ಮೈದಾನವಾದ ವಾಂಖೆಡೆ ಸ್ಟೇಡಿಯಂನಲ್ಲಿ.

ಐಪಿಎಲ್ 2024ರ ಪಂದ್ಯಾವಳಿಯ 29ನೇ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಿದವು. ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಉದ್ದಕ್ಕೂ ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಾಬಲ್ಯ ಸಾಧಿಸಿ ಅಂತಿಮವಾಗಿ 20 ರನ್ಗಳಿಂದ ಗೆಲುವು ಸಾಧಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ನ ಕೊನೆಯ ಓವರ್ ಬೌಲ್ ಮಾಡಲು ಬಂದರು. ಕೊನೆಯ ನಾಲ್ಕು ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್ಗೆ ಬಂದ ಎಂಎಸ್ ಧೋನಿಯಿಂದ ಸತತ ಮೂರು ಸಿಕ್ಸರ್ ಬಾರಿಸಿದರು. ಇದು ಸಿಎಸ್ಕೆ ತಂಡವನ್ನು 206 ರನ್ಗಳಿಗೆ ಕೊಂಡೊಯ್ಯಿತು.
ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಪ್ರದರ್ಶನ ಮತ್ತು ನಾಯಕತ್ವದ ತಂತ್ರಗಳನ್ನು ನೋಡಿದ ಭಾರತೀಯ ಮಾಜಿ ಬ್ಯಾಟರ್ ಸುನಿಲ್ ಗವಾಸ್ಕರ್ ತೀವ್ರ ನಿರಾಶೆ ವ್ಯಕ್ತಪಡಿಸಿದರು.

74 ವರ್ಷದ ಸುನಿಲ್ ಗವಾಸ್ಕರ್ ಅವರು ಹಾರ್ದಿಕ್ ಪಾಂಡ್ಯ ಅವರ ಮೈದಾನದಲ್ಲಿನ ನಿರ್ಧಾರಗಳು ಮತ್ತು ಬೌಲಿಂಗ್ ಪ್ರದರ್ಶನಕ್ಕಾಗಿ ಅವರ ನಾಯಕತ್ವವನ್ನು 'ಕಳಪೆ' ಮತ್ತು ಅವರ ಬೌಲಿಂಗ್ ಅನ್ನು ತಾನು ದೀರ್ಘಕಾಲದಿಂದ ನೋಡಿದ "ಕೇವಲ ಕೆಟ್ಟ ಬೌಲಿಂಗ್' ಎಂದು ಲೆಬಲ್ ಮಾಡಿದರು.
"ಬಹುಶಃ ನಾನು ದೀರ್ಘಕಾಲದಿಂದ ನೋಡಿದ ಅತ್ಯಂತ ಕೆಟ್ಟ ರೀತಿಯ ಬೌಲಿಂಗ್. ಬ್ಯಾಟರ್ ಸಿಕ್ಸರ್ಗೆ ಹೊಡೆಯುವ ರೀತಿಯ ಎಸೆತಗಳನ್ನು ಹಾಕಿದರು. ಒಂದು ಸಿಕ್ಸ್ ಚೆನ್ನಾಗಿದೆ. ಈ ಬ್ಯಾಟರ್ ಅವರು ಹೊಡೆಯಲು ಬಯಸುವ ಲೆಂತ್ ಬಾಲ್ಗಾಗಿ ಕಾಯುತ್ತಿದ್ದಾರೆ ಎಂದು ನಿಮಗೆ ತಿಳಿದ ಮೇಲೂ ಮುಂದಿನದು ಲೆಂತ್ ಬಾಲ್ ಆಗಿರುತ್ತದೆ. ಎಂಎಸ್ ಧೋನಿ ಸಿಕ್ಸರ್ಗಾಗಿ ಹುಡುಕುತ್ತಿದ್ದಾರೆ ಎಂದು ನಿಮಗೆ ತಿಳಿದರೂ ಮೂರನೇ ಬಾಲ್ ಮತ್ತೆ ಲೆಗ್ ಮೇಲೆ ಫುಲ್ ಟಾಸ್ ಆಗಿದೆ," ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊನೆಯ ಓವರ್ ವಿಶ್ಲೇಷಿಸಿದರು.

ಅಷ್ಟೇ ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರಗಳನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ಸಿಎಸ್ಕೆ ತಂಡವನ್ನು ಸುಮಾರು 190 ರನ್ಗಳಿಗೆ ಸೀಮಿತಗೊಳಿಸಬೇಕಿತ್ತು. ಆದರೆ ಎಂಎಸ್ ಧೋನಿ ಅವರ ಅಂತಿಮ ಓವರ್ಗಳ ನಂತರ, ಇದು ಸಂಪೂರ್ಣವಾಗಿ ವಿಭಿನ್ನ ಕಥೆಯಾಗಿತ್ತು ಎಂದು ಮಾಜಿ ಬ್ಯಾಟರ್ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ಮಧ್ಯಮ ಓವರ್ಗಳಲ್ಲಿ ಶಿವಂ ದುಬೆ ಅವರೊಂದಿಗೆ ರುತುರಾಜ್ ಗಾಯಕ್ವಾಡ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಹೊರತಾಗಿಯೂ ಸಿಎಸ್ಕೆ ತಂಡವನ್ನು 185-190 ರನ್ಗಳಿಗೆ ನಿರ್ಬಂಧಿಸಬೇಕಾಗಿತ್ತು ಎಂದು ಭಾವಿಸುತ್ತೇನೆ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.