
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಇಂದು ಕಣಕ್ಕಿಳಿಯಬಹುದು, ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಬಹುದು ಎಂದು ಕಾದು ಕುಳಿತಿದ್ದ ಸಚಿನ್ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಐಪಿಎಲ್ 2022ರ ಕೊನೆಯ ಲೀಗ್ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅರ್ಜುನ್ಗೆ ಅವಕಾಶ ನೀಡಿಲ್ಲ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ಸಿಗಬಹುದೆಂದು ವರದಿಯಾಗಿತ್ತು. ಅಭಿಮಾನಿಗಳು ಸಹ ಮುಂಬೈನ ಕೊನೆಯ ಪಂದ್ಯದಲ್ಲಿ ಅವಕಾಶ ನೀಡಬಹುದೆಂದು ನಿರೀಕ್ಷಿಸಿದ್ದರು. ಆದ್ರೆ ನಾಯಕ ರೋಹಿತ್ ಶರ್ಮಾ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದರೂ ಸಹ, ಅರ್ಜುನ್ ತೆಂಡೂಲ್ಕರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಲಿಲ್ಲ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ತಂಡದಲ್ಲಿ ಎರಡು ಬದಲಾವಣೆ ಮಾಡಿದೆ. ಡೆವಾಲ್ಡ್ ಬ್ರೇವಿಸ್ ಹಾಗೂ ಹೃತಿಕ್ ಶೋಕೀನ್ ಆಟಗಾರರಾದ ಸ್ಟಬ್ಸ್ ಮತ್ತು ಸಂಜಯ್ ಬದಲು ಅವಕಾಶ ಪಡೆದಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೀಸನ್ನಲ್ಲಿ ಒಂದೂ ಪಂದ್ಯ ಅವಕಾಶ ನೀಡದ ತಂಡದ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಆತನನ್ನ ಹೊಂದುವ ಯೋಗ್ಯತೆ ನಿಮಗಿಲ್ಲ ಎಂದು ಕಟುವಾದ ಟೀಕೆಗಳನ್ನ ಮಾಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.
ಪವರ್ ಪ್ಲೇ ಓವರ್ಗಳಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿರುವ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ನ ಮೂರು ವಿಕೆಟ್ಗಳನ್ನ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಡೇವಿಡ್ ವಾರ್ನರ್ (5), ಪೃಥ್ವಿ ಶಾ (24), ಮಿಚೆಲ್ ಮಾರ್ಷ್ (0) ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿದೆ.