ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ರೋಹಿತ್ ಶರ್ಮಾ ಅವರು ಮೈದಾನದಲ್ಲಿ ತಮ್ಮ ಉಲ್ಲಾಸದ ಕಾಮೆಂಟ್ಗಳಿಗೆ ಹೆಸರುವಾಸಿಯಾಗಿದ್ದಾರೆ. ಸಹ ಆಟಗಾರರಿಗೆ ಬೈಯ್ಯುವುದು, ಕಾಲೆಳೆಯುವುದನ್ನು ಮಾಡುತ್ತಲೇ ಇರುತ್ತಾರೆ.
ಇದೀಗ ಗುರುವಾರದಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್ 2024ರ ರೋಚಕ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರಿಂದ ಸ್ಟಂಪ್ ಮೈಕ್ ಮತ್ತೊಂದು ಹೇಳಿಕೆಯನ್ನು ರೆಕಾರ್ಡ್ ಮಾಡಿದೆ.

ಆರ್ಸಿಬಿ ತಂಡದ ಫಿನಿಶಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಇನ್ನಿಂಗ್ಸ್ನ ಕೊನೆಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾಗ, ರೋಹಿತ್ ಶರ್ಮಾ ಅವರು ಸ್ಟಂಪ್ ಮೈಕ್ನಲ್ಲಿ "ವಿಶ್ವಕಪ್ ಆಟ' ಎಂಬ ಹೇಳಿಕೆಯೊಂದಿಗೆ ದಿನೇಶ್ ಕಾರ್ತಿಕ್ರನ್ನು ಸ್ಲೆಡ್ಜ್ ಮಾಡಿದರು.
"ವಿಶ್ವಕಪ್ ಕೆ ಸೆಲೆಕ್ಟ್ ಕೆ ಲಿಯೇ ಪುಶ್ ಕರ್ನಾ ಹೈ ಇಸ್ಕೋ, ಶಭಾಷ್. ದಿಮಾಗ್ ಮೇ ಚಲ್ ರಹಾ ಹೈ ಇಸ್ಕೆ ವಿಶ್ವಕಪ್. ಶಭಾಶ್ ಡಿಕೆ, ವಿಶ್ವಕಪ್ ಖೇಲ್ನಾ ಹೈ (ಟಿ20 ವಿಶ್ವಕಪ್ ಆಯ್ಕೆಗಾಗಿ ಒತ್ತಾಯಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಟಿ20 ವಿಶ್ವಕಪ್ ಇದೆ. ಅದ್ಭುತ ಡಿಕೆ. ನೀವು ವಿಶ್ವಕಪ್ ಆಡಬೇಕು," ಎಂದು ರೋಹಿತ್ ಶರ್ಮಾ ಕಾಲೆಳೆದರು.
ಗಮನಾರ್ಹವಾಗಿ, ದಿನೇಶ್ ಕಾರ್ತಿಕ್ ಅವರು ಐಪಿಎಲ್ 2024ರಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಉತ್ತಮ ಆಟ ಆಡುತ್ತಿದ್ದಾರೆ. ಈ ಥರದ ಆಟ ಇದೇ ಮೊದಲೇನಲ್ಲ, ಈ ಹಿಂದೆ 2022ರ ಐಪಿಎಲ್ನಲ್ಲಿ ಆರ್ಸಿಬಿ ಪರ ಅದ್ಭುತ ಬ್ಯಾಟಿಂಗ್ನಿಂದಾಗಿ ಅದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಹೀಗಾಗಿ, ಟಿ20 ವಿಶ್ವಕಪ್ ಇರುವ ವರ್ಷದ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ ಮತ್ತು ಭಾರತ ತಂಡಕ್ಕೆ ಆಯ್ಕೆಯಾಗಲು ಒತ್ತಾಯಿಸುತ್ತಾರೆ ಎಂಬ ಮಾತಿದೆ.
ಇದೇ ವೇಳೆ ಮುಂಬರುವ 2024ರ ಟಿ20 ವಿಶ್ವಕಪ್ಗೆ ಭಾರತ ತಂಡದ ಆಯ್ಕೆ ಸಂಬಂಧಿಸಿದಂತೆ ದಿನೇಶ್ ಕಾರ್ತಿಕ್ ಅವರು ರಾಷ್ಟ್ರೀಯ ಆಯ್ಕೆಗಾರರನ್ನು ಮೆಚ್ಚಿಸಲು ಸಾಧ್ಯವಾದರೆ, ಮತ್ತೆ ಭಾರತ ತಂಡದಲ್ಲಿ ಸ್ಥಾನವನ್ನು ಕಂಡುಕೊಳ್ಳಬಹುದು.
ಮುಂಬೈ ಇಂಡಿಯನ್ಸ್ ವಿರುದ್ಧ ದಿನೇಶ್ ಕಾರ್ತಿಕ್ ಅವರು ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಮೇತ ಅಜೇಯ 53 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ವಿಕೆಟ್ಗೆ 196 ರನ್ಗಳಿಗೆ ಕೊಂಡೊಯ್ದರು. ಈ ಮೂಲಕ ಟಿ20 ವಿಶ್ವಕಪ್ಗಾಗಿ ಭಾರತ ತಂಡದ ಆಯ್ಕೆಯಲ್ಲಿ ತಮ್ಮನ್ನು ಪರಿಗಣಿಸುವಂತೆ ಸಂದೇಶ ರವಾನಿಸಿದರು.

ಆರ್ಸಿಬಿ ತನ್ನ ಬ್ಯಾಟಿಂಗ್ ಇನ್ನಿಂಗ್ಸ್ನ ಅಂತಿಮ ಓವರ್ನಲ್ಲಿ 19 ರನ್ ಗಳಿಸಿದ ದಿನೇಶ್ ಕಾರ್ತಿಕ್ ಅವರು ಮುಂಬೈ ಇಂಡಿಯನ್ಸ್ ವೇಗದ ಬೌಲರ್ನನ್ನು ದಂಡಿಸಿದರು.
ಭಾರತದ ಅನುಭವಿ ಕ್ರಿಕೆಟಿಗ ತನ್ನ ಬ್ಯಾಟಿಂಗ್ ಪ್ರದರ್ಶನದಲ್ಲಿ ವೈವಿಧ್ಯಮಯ ಶಾಟ್ಗಳೊಂದಿಗೆ ಒಂದೇ ಓವರ್ನಲ್ಲಿ ಒಂದೇ ಪ್ರದೇಶದ ಕಡೆ ನಾಲ್ಕು ಬೌಂಡರಿ ಬಾರಿಸಿದರು. ಮುಂಬೈ ಇಂಡಿಯನ್ಸ್ ಪರ ಐದು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಅವರಿಗೆ ಸಿಕ್ಸರ್ ಬಾರಿಸಿದ ಆರ್ಸಿಬಿಯ ಏಕೈಕ ಬ್ಯಾಟರ್ ದಿನೇಶ್ ಕಾರ್ತಿಕ್.
ಆದರೆ, ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರಯತ್ನ ವ್ಯರ್ಥವಾಯಿತು. ಏಕೆಂದರೆ ಮುಂಬೈ ಇಂಡಿಯನ್ಸ್ ನಿಗದಿತ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ಪ್ರಚಂಡ ಬ್ಯಾಟಿಂಗ್ ಪರಾಕ್ರಮ ತೋರಿಸಿದರು.
ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅದ್ಭುತ ಆರಂಭವನ್ನು ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 52 ರನ್ಗಳೊಂದಿಗೆ ಗೆಲುವಿನ ವಿಜೃಂಭಣೆಗೆ ಕಾರಣರಾದರು.