ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ದೆಹಲಿಯಲ್ಲಿ ಮುಖಾಮುಖಿಯಾಗಿದೆ. ಟೀಮ್ ಇಂಡಿಯಾದ ಎರಡನೇ ಪಂದ್ಯ ಇದಾಗಿದ್ದು ಈ ಪಂದ್ಯದಲ್ಲಿ ಭರ್ಜರಿ ಗೆಲುವಿನ ಮೂಲಕ ಟೂರ್ನಿಯಲ್ಲಿ ಮುನ್ನುಗ್ಗುವ ಲೆಕ್ಕಾಚಾರದಲ್ಲಿ ಇದೆ ಟೀಮ್ ಇಂಡಿಯಾ. ವಿರಾಟ್ ಕೊಹ್ಲಿಯ ತವರು ದೆಹಲಿಯಲ್ಲಿ ಈ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಂದ್ಯಕ್ಕೆ ಆಗಮಿಸಿದ್ದು ಮೈದಾನದಿಂದ ಪಂದ್ಯವನ್ನು ಆನಂದಿಸುತ್ತಿದ್ದಾರೆ.
ಆದರೆ ಈ ಪಂದ್ಯ ಆರಂಭವಾಗುತ್ತಿದ್ದಂತೆಯೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕಾಮೆಂಟೇಟರ್ ಮೈಕಲ್ ವಾನ್ ಈ ಪಂದ್ಯಕ್ಕೂ ಪ್ರೇಕ್ಷಕರೇ ಇಲ್ಲ ಎಂದು ಟ್ವೀಟ್ ಮಾಡಿದ್ದು ಅಚ್ಚರಿ ಮೂಡಿಸಿದೆ. ಪಂದ್ಯ ಆರಂಭವಾದ ಕೆಲವೇ ಹೊತ್ತಿನಲ್ಲಿ ಅವರು ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಪ್ರೇಕ್ಷಕರು ತುಂಬದೆ ಖುರ್ಚಿಗಳು ಖಾಲಿಯಿದೆ ಯಾಕೆ? ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಏಕದಿನ ಪಂದ್ಯದಲ್ಲಿ ಪಂದ್ಯದ ಆರಂಭದಲ್ಲಿಯೇ ಎಲ್ಲಾ ಖುರ್ಚಿಗಳು ಭರ್ತಿಯಾಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಿಧಾನಕ್ಕೆ ಅಭಿಮಾನಿಗಳಿ ಕ್ರೀಡಾಂಗಣದತ್ತ ಆಗಮಿಸುತ್ತಾರೆ. ಮಧ್ಯಾಹ್ನ ಬಿಸಿಲಿನ ತೀವ್ರತೆಯನ್ನು ಕಡಿಮೆಯಾದ ಬಳಿಕ ತೆರಳುವ ಲೆಕ್ಕಾಚಾರದಲ್ಲಿಯೂ ಬಹುತೇಕ ಅಭಿಮಾನಿಗಳಿರುತ್ತಾರೆ. ಅಲ್ಲದೆ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯ ವಾರದ ದಿನದಲ್ಲಿ ನಡೆಯುತ್ತಿದೆ. ಹೀಗಾಗಿ ಬಹುತೇಕ ಅಭಿಮಾನಿಗಳು ತಮ್ಮ ಕೆಲಸದ ಅವಧಿಯನ್ನು ಮುಗಿಸಿದ ಬಳಿಕ ಪಂದ್ಯದ ವೀಕ್ಷಣೆಗೆ ಆಗಮಿಸುವ ಸಾಧ್ಯತೆಯಿರುತ್ತದೆ.
ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆಯೋಜನೆಯಲ್ಲಿ ಆರಂಭವಾದ ಬೆನ್ನಲ್ಲೇ ಒಂದಲ್ಲಾ ಒಂದು ರೀತಿಯಲ್ಲಿ ಹುಳುಕುಗಳನ್ನು ಹುಡುಕುವ ಕೆಲಸಗಳಾಗುತ್ತಿದೆ. ಮೊದಲ ಪಂದ್ಯದ ಅಹ್ಮದಾಬಾದ್ನಲ್ಲಿ ಆಯೋಜನೆಯಾದಾಗ ಪ್ರೇಕ್ಷಕರು ತುಂಬದೇ ಇದ್ದಾಗ ಸಹಜವಾಗಿ ಟೀಕೆಗಳು ಕೇಳಿ ಬಂದಿದ್ದವು. ಆದರೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೂರ್ನಿಯ ವೈಫಲ್ಯ ಎನ್ನುವಂತೆಯೇ ಬಿಂಬಿಸಲಾಯಿತು. ನಂತರ ಗುವಾಹಟಿ ಪಿಚ್ ವಿಚಾರವಾಗಿ ಜೋಸ್ ಬಟ್ಲರ್ ಅವರ ಕಟು ಟೀಕೆ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮೈಕಲ್ ವಾನ್ ಈ ಹೇಳಿಕೆ ನೀಡಿದ್ದಾರೆ. ಇದು ಈ ಟೀಕೆಯ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ.
ಭಾರತದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಟೂರ್ನಿಯ ಪಂದ್ಯಗಳ ಕೆಲ ಹುಳುಕುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಡೆದುಕೊಳ್ಳುತ್ತಿದೆ. ಈ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿಶ್ವಕಪ್ ಆಯೋಜನೆ ಮಾಡುತ್ತಿರುವ ಬಿಸಿಸಿಐ ಕೆಲ ವಿಚಾರಗಳಲ್ಲಿ ಎಡವಿದಂತೆ ಕಾಣಿಸಿದರೂ ಮತ್ತೊಂದು ಇದೊಂದು ವ್ಯವಸ್ಥಿತವಾ ಎನ್ನುವ ಅನುಮಾನಗಳೂ ಮೂಡುತ್ತಿದೆ. ಭಾರತವನ್ನು ಹಾಗೂ ಬಿಸಿಸಿಐಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡುವ ಪ್ರಯತ್ನಗಳಾ ಎನ್ನುವ ಶಂಕೆಗಳೂ ವ್ಯಕ್ತವಾಗುತ್ತಿದೆ.