
ನವದೆಹಲಿ, ನವೆಂಬರ್ 27: ಐಸಿಸಿ ಮಹಿಳಾ ವಿಶ್ವ ಟಿ20ಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತದ ಆಡುವ 11 ಆಟಗಾರ್ತಿಯರ ತಂಡದಿಂದ ಮಿಥಾಲಿ ರಾಜ್ ಅವರನ್ನು ಹೊರಗಿಟ್ಟಿದ್ದು ವಿವಾದಕ್ಕೆ ಈಡಾಗಿತ್ತು. ಇದೀಗ ವಿವಾದಕ್ಕೆ ಮತ್ತೆ ಕಿಡಿ ಹತ್ತಿಕೊಂಡಿದೆ.
ತನ್ನನ್ನು ಆಡುವ 11 ಆಟಗಾರ್ತಿಯರ ತಂಡದಿಂದ ಹೊರಗಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದ ಬಿಸಿಸಿಐ ಮೇಲೆ ಕಿಡಿ ಕಾರಿರುವ ಮಿಥಾಲಿ, 'ಅಧಿಕಾರವಿರುವ ಕೆಲವರು ನನ್ನನ್ನು ನಾಶಪಡಿಸಲೆಂದೇ ಹೊಂಚು ಹಾಕುತ್ತಿದ್ದಾರೆ' ಎಂದು ದೂರಿದ್ದಾರೆ. ಜೊತೆಗೆ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ ಮೇಲೂ ಮಿಥಾಲಿ ಕಿಡಿ ಕಾರಿದ್ದಾರೆ.
ಸಿಒಎ ಸದಸ್ಯೆ ಡಯಾನಾ ನನ್ನನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಿಥಾಲಿ ಸದ್ಯ ಭಾರತ ಮಹಿಳಾ ತಂಡದ ಕೋಚ್ ಜವಾಬ್ದಾರಿ ವಹಿಸಿರುವ ರಮೇಶ್ ಪೊವಾರ್ ಅವರ ಮೇಲೂ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಮೇಶ್ ಕೂಡ ನನ್ನನ್ನು ಅವಮಾನಿಸಿದ್ದಾರೆ ಎಂದು ಮಿಥಾಲಿ ಮಂಗಳವಾರ (ನವೆಂಬರ್ 27) ಹೇಳಿಕೊಂಡಿದ್ದಾರೆ.
ಸೆಮಿಫೈನಲ್ ನಲ್ಲಿ ಭಾರತ ಸೋತ ಬಳಿಕ ವಿವಾದ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಆದರೆ ಮಿಥಾಲಿಗೆ ಅವಕಾಶ ನೀಡದಿದ್ದನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ ಸಮರ್ಥಿಸಿಕೊಂಡಿದ್ದರಲ್ಲದೆ, ಡಯಾನಾ ಕೂಡ ಕೌರ್ ಪರ ಗುರಾಣಿ ಹಿಡಿದಿದ್ದರು. ತಂಡ ನಿರ್ವಹಣಾ ಸಮಿತಿ ಆರಿಸಿದ ತಂಡವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಡಯಾನಾ ಹೇಳಿದ್ದರು. ಇದು ಬಿಸಿಸಿಐಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿದೆ.