ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಶ್ರೇಷ್ಠ ಪಂದ್ಯವು ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಈಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಗಡಿಯಾಚೆಯಿಂದ ಮೈಂಡ್ ಗೇಮ್ಸ್ ಪ್ರಕ್ರಿಯೆ ಆರಂಭವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಟೀಮ್ ಇಂಡಿಯಾ ಆಟಗಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬಾರದು ಎಂದು ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್ ತಮ್ಮ ತಂಡದ ಆಟಗಾರರಿಗೆ ಹೇಳಿದ್ದಾರೆ.
ಮೊಯಿನ್ ಖಾನ್ ಪ್ರಕಾರ, ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬಾರದು. ಈ ಅಚ್ಚರಿ ಹೇಳಿಕೆ ನೀಡುವ ಮೂಲಕ ಮೊಯಿನ್ ಖಾನ್ ಸುದ್ದಿಯಲ್ಲಿದ್ದಾರೆ.

ಸಂದರ್ಶನವೊಂದರಲ್ಲಿ, ಮೊಯಿನ್ ಖಾನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಗಳನ್ನು ನಾನು ನೋಡುವಾಗ, ಟೀಮ್ ಇಂಡಿಯಾ ಆಟಗಾರರು ಕ್ರೀಸ್ಗೆ ಬಂದಾಗ ನಮ್ಮ ಆಟಗಾರರು ಅವರ ಬ್ಯಾಟ್ಗಳನ್ನು ಪರಿಶೀಲಿಸುತ್ತಾರೆ. ಸ್ನೇಹಪರ ಸಂಭಾಷಣೆ ನಡೆಸುತ್ತಾರೆ. ಇದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಮೊಯೀನ್ ಖಾನ್ ಹೇಳಿದ್ದಾರೆ.
ನಮ್ಮ ಹಿರಿಯ ಆಟಗಾರರು ಭಾರತದ ವಿರುದ್ಧ ಆಡುವಾಗ ದೂರು ನೀಡಬೇಡಿ ಎಂದು ಹೇಳುತ್ತಿದ್ದರು. ಮೈದಾನದಲ್ಲಿ ಅವರೊಂದಿಗೆ ಮಾತನಾಡುವ ಅಗತ್ಯವಿಲ್ಲ. ನೀವು ಅವರೊಂದಿಗೆ ಸ್ನೇಹದಿಂದ ವರ್ತಿಸಿದಾಗ, ಅವರು ಅದನ್ನು ನಿಮ್ಮ ದೌರ್ಬಲ್ಯವೆಂದು ಪರಿಗಣಿಸುತ್ತಾರೆ ಎನ್ನುತ್ತಿದ್ದರು ಎಂದು ಮೊಯೀನ್ ಖಾನ್ ಪಾಕಿಸ್ತಾನ ತಂಡದೊಳಗೆ ನಡೆಯುತ್ತಿದ್ದ ಸಂಭಾಷನೆಯನ್ನು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಆಡುವಾಗ ನಮ್ಮ ಆಟಗಾರರ ವರ್ತನೆ ನನ್ನ ತಿಳುವಳಿಕೆಯನ್ನು ಮೀರಿದೆ. ಮೈದಾನದ ಹೊರಗೆ ಸಹ ವೃತ್ತಿಪರ ಆಟಗಾರರಾಗಿ ನೀವು ಕೆಲವು ಮಿತಿಗಳನ್ನು ಹೊಂದಿರಬೇಕು ಎಂದು ಪಾಕಿಸ್ತಾನ ಆಟಗಾರರಿಗೆ ಮೊಯೀನ್ ಖಾನ್ ಕಿವಿ ಮಾತು ಹೇಳಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆ ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತ ಸೋಲನ್ನು ಎದುರಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. ಭಾರತ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅವಿಸ್ಮರಣೀಯ ಸೋಲು ಪಾಕಿಸ್ತಾನ ನೀಡಿತ್ತು. ಇದರೊಂದಿಗೆ ಭಾರತದ ಪ್ರಶಸ್ತಿ ಗೆಲ್ಲುವ ಕನಸನ್ನೂ ಮುರಿದಿತ್ತು.