ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ 6 ವಿಕೆಟ್ಗಳಿಂದ ಗೆದ್ದುಕೊಂಡಿತು. ಸತತ ಎರಡನೇ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿ ಮಿಂಚಿದರು. ಕೊಹ್ಲಿ ಅಜೇಯ 100 ರನ್ ಕಲೆ ಹಾಕುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಆಡುವ ಮೂಲಕ ಪಾಕಿಸ್ತಾನ ಬೌಲರ್ಗಳ ಬೆವರಿಳಿಸಿದರು. ಆದರೆ ಪಾಕಿಸ್ತಾನದ ಅನುಭವಿ ಬ್ಯಾಟರ್ ಬಾಬರ್ ಅಜಮ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಅವರು 26 ಎಸೆತಗಳಲ್ಲಿ ಕೇವಲ 23 ರನ್ ಗಳಿಸಲು ಸಾಧ್ಯವಾಯಿತು. ಪಂದ್ಯದ ನಂತರ ಅವರ ಮೇಲೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಂತರ, ಮಾಜಿ ಮೊಹಮ್ಮದ್ ಹಫೀಜ್ ಅವರು ವಿರಾಟ್ ಕೊಹ್ಲಿಯನ್ನು 'ಕಿಂಗ್' ಎಂದು ಕರೆಯುವ ಮೂಲಕ ಬಾಬರ್ ಅಜಮ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಹಫೀಜ್ ಮಾತನಾಡುವಾಗ, ಬಾಬರ್ ಅಜಮ್ ಅವರ ಪಿಆರ್ ಏಜೆನ್ಸಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಹೆಚ್ಚು ಪ್ರಚಾರ ಮಾಡುವವರನ್ನು ಟೀಕಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನಂತರ ಹಫೀಜ್ ಅವರ ಅಚ್ಚರಿ ಹೇಳಿಕೆ ನೀಡಿದ್ದಾರೆ. ಕೊಹ್ಲಿ ತಮ್ಮ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು.
ವಿರಾಟ್ಗಿಂತ ಬಾಬರ್ ಅಜಮ್ ಅವರ ಉತ್ತಮ ಆರಂಭದ ಹೊರತಾಗಿಯೂ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಮೊದಲ ಪವರ್ಪ್ಲೇನಲ್ಲಿ ಬಾಬರ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಆದರೆ 9ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಪಂದ್ಯದ ನಂತರ, ಹಫೀಜ್ ವಿರಾಟ್ ಕೊಹ್ಲಿಯನ್ನು ಬಿಗ್ ಮ್ಯಾಚ್ ಪ್ಲೇಯರ್ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಕೊಹ್ಲಿ ಪ್ರಪಂಚದಾದ್ಯಂತ ಅತಿಹೆಚ್ಚು ರನ್ ಗಳಿಸಿದ್ದಾರೆ, ಹೀಗಾಗಿ ಅವರು 'ರಾಜ' ಎಂಬ ಬಿರುದಿಗೆ ಅರ್ಹರು ಎಂದು ಹೇಳಿದ್ದಾರೆ.
ವಿರಾಟ್ ಒಬ್ಬ ಬಿಗ್ ಮ್ಯಾಚ್ ಪ್ಲೇಯರ್. ಅವರು ದೊಡ್ಡ ಅವಕಾಶಗಳನ್ನು ಹುಡುಕುತ್ತಲೇ ಇರುತ್ತಾರೆ. ಹೀಗಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಿದಾಗಲೆಲ್ಲಾ, ಆ ಪಂದ್ಯಗಳಲ್ಲಿ ನೀವು ಸ್ಟಾರ್ ಆಗುವ ಅವಕಾಶ ಪಡೆಯುತ್ತೀರಿ. ಶೋಯೆಬ್ ಮಲಿಕ್ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಇಲ್ಲಿಂದ ಅವರು ಸ್ಟಾರ್ ಆದರು. ಶಾಹಿದ್ ಅಫ್ರಿದಿ ಕೂಡ ಭಾರತದ ವಿರುದ್ಧ ಸಿಕ್ಸರ್ ಬಾರಿಸಿದಾಗ ಸ್ಟಾರ್ ಆದರು. ವಿರಾಟ್ ಕೊಹ್ಲಿ ಆ ಅವಕಾಶಗಳಿಗಾಗಿ ಕಾಯುತ್ತಲೇ ಇರುತ್ತಾರೆ. ಆ ಅವಕಾಶಗಳನ್ನು ಬಳಸಿಕೊಳ್ಳಲು ಕಾಯುತ್ತಾರೆ. ಅವರಿಗೆ ಪಾಸಿಟಿವ್ ಮನಸ್ಥಿತಿ ಇದೆ. ಅವರು ನಾನು ಆಡುವುದಷ್ಟೇ ಅಲ್ಲ, ನನ್ನ ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸುತ್ತೇನೆ ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ಮೊಹಮ್ಮದ್ ಹಫೀಜ್ ಪಂದ್ಯದ ನಂತರ ಮಾತನಾಡಿದ್ದಾರೆ.
ಯಾರಾದರೂ ರಾಜ ಎಂದು ಕರೆಸಿಕೊಳ್ಳಲು ಅರ್ಹರಾಗಿದ್ದರೆ, ಅದು ವಿರಾಟ್ ಕೊಹ್ಲಿ. ಬಾಬರ್ ಅಜಮ್ ಅಲ್ಲ. ಅವರು ಪಿಆರ್ ಬಳಸಿ ರಾಜನಾಗಿಲ್ಲ. ಆ ವಕ್ತಾರರಿಗೆ ಕರೆ ಮಾಡಿ, ಕನ್ನಡಿ ತೋರಿಸಿ ಎಂದು ಮೊಹಮ್ಮದ್ ಹಫೀಜ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ ತಂಡ ಸತತ ಎರಡನೇ ಸೋಲು ಕಂಡಿದೆ. ಭಾರತದ ವಿರುದ್ಧದ ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಈಗ ತಂಡವು ಉಳಿದ ಎಲ್ಲಾ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಬಾಂಗ್ಲಾದೇಶ ವಿರುದ್ಧದ ಕೊನೆಯ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ.