
ಬೆಂಗಳೂರು, ಜನವರಿ 12: ಟೀಂ ಇಂಡಿಯಾದ ಮಾಜಿ ಆಟಗಾರಮೊಹಮ್ಮದ್ ಕೈಫ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜೊತೆಗಿನ ಚಿತ್ರವೊಂದನ್ನು ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆಗೀಡಾಗಿದೆ. ಚಿತ್ರಕ್ಕಿಂತ ಚಿತ್ರಕ್ಕೆ ನೀಡಿದ್ದ ಅಡಿಬರಹ ಅನೇಕ ಮನಗೆದ್ದಿದೆ, ಹೃದಯ ತಟ್ಟಿದೆ.
2018ರ ಜೂನ್ 13ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕೈಫ್ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಫೀಲ್ಡರ್ ಗಳಲ್ಲಿ ಒಬ್ಬರು. 2002ರ ಜುಲೈ 13ರಂದು ಇಂಗ್ಲೆಂಡ್ ವಿರುದ್ಧದ ನ್ಯಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣದವರು. 75 ಎಸೆತಗಳಲ್ಲಿ 87ರನ್ ಚೆಚ್ಚಿದ್ದರು. ಯುವರಾಜ್ ಸಿಂಗ್ 63 ಎಸೆತಗಳಲ್ಲಿ 69ರನ್ ಗಳಿಸಿದ್ದರು. ಭಾರತ 326ರನ್ ಚೇಸ್ ಮಾಡಿತ್ತು. ಈ ಸವಿನೆನಪಿನಲ್ಲೇ ಜುಲೈ 13ರಂದೇ ನಿವೃತ್ತಿ ಘೋಷಿಸಿದ್ದರು. ನಿವೃತ್ತಿ ದಿನಾಂಕ ಆಯ್ಕೆಯನ್ನು ಸೂಚಿಸಿದ್ದು ಸಚಿನ್ ತೆಂಡೂಲ್ಕರ್ ಎಂಬ ವಿಷಯವನ್ನು ಕೈಫ್ ಹೇಳಿಕೊಂಡಿದ್ದಾರೆ.
ನಿವೃತ್ತಿ ದಿನಾಂಕವನ್ನಾಗಿ ನೀವು ಅತ್ಯುತ್ತಮ ದಿನವನ್ನು ಮಾಡಿಕೊಂಡಿದ್ದೀರಿ. ಈ ನೆನಪುಗಳು ಸದಾ ಕಾಲ ನಮ್ಮ ಮನಸಿನಲ್ಲಿ ಉಳಿಯಲಿವೆ. 2002ರಲ್ಲಿ ನೀವು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯನ್ನು ಆಡುವಾಗ ನಿಮ್ಮನ್ನು ಹರಸಿದ್ದ ದೇವರು ಇನ್ನು ಮುಂದೆ ಕೂಡ ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರ ಎಂಬಂತೆ ಕೈಫ್ ಅವರು ಸಚಿನ್ ತೆಂಡೂಲ್ಕರ್ ಜೊತೆಗಿರುವ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೃಷ್ಣ ಪರಮಾತ್ಮನೊಂದಿಗೆ ನಾನು ಸುಧಾಮನಾದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಆದರೆ, ಕೆಲವರು ಕೈಫ್ ಕಾಲೆಳೆದು, ನಿಮ್ಮ ಮೇಲೆ ಫತ್ವಾ ಹೊರಡಿಸಲಾಗುತ್ತದೆ ಎಚ್ಚರ ಎಂದಿದ್ದಾರೆ. ಇನ್ನು ಕೆಲವರು ಸಚಿನ್ ಜೀವನದ ಸುಧಾಮದ ಪಾತ್ರ ವಿನೋದ್ ಕಾಂಬ್ಳಿಗೆ ಮಾತ್ರ ಒಪ್ಪುತ್ತದೆ ಎಂದಿದ್ದಾರೆ.
ಮೊಹಮ್ಮದ್ ಕೈಫ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 125 ಏಕದಿನ ಪಂದ್ಯಾವಳಿಗಳನ್ನು ಆಡಿದ್ದು 2,753ರನ್ ಗಳಿಸಿದ್ದಾರೆ. 32.01 ರನ್ ಸರಾಸರಿ ಹೊಂದಿದ್ದು, 2 ಶತಕ ಗಳಿಸಿದ್ದಾರೆ. 13 ಟೆಸ್ಟ್ ಇನ್ನಿಂಗ್ಸ್ ನಿಂದ 324ರನ್ ಹಾಗೂ ಒಂದು ಶತಕ ಬಾರಿಸಿದ್ದಾರೆ.