ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಎಂದೂ ಕಂಡಿರದ ಅಮೋಘ ಪ್ರದರ್ಶನ ನೀಡುತ್ತಿದ್ದು, ಈ ಪ್ರದರ್ಶನದ ಹಿಂದೆ ತಂಡದ ಸಂಘಟಿತ ಆಟ ಎದ್ದು ಕಾಣುತ್ತದೆ.
ಅದರಲ್ಲೂ ಬೌಲರ್ಗಳ ಪರಿಣಾಮಕಾರಿ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಚಿತ್ತವನ್ನು ಕದ್ದಿದೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್ಗಳ ಪೈಕಿ ಈ ಒಬ್ಬ ಬೌಲರ್ ನಿಜಕ್ಕೂ ಬೆಂಕಿಯಂತೆ ಚೆಂಡನ್ನು ಉಗುಳುತ್ತಿದ್ದಾರೆ. ಈ ಬೌಲರ್ನ ಎಸೆತವನ್ನು ಎದುರಿಸಲು ಎದುರಾಳಿ ಬ್ಯಾಟರ್ಗಳು ಹೈರಾಣಾಗಿದ್ದಾರೆ. ಈ ಬೌಲರ್ ಬೇರಾರೂ ಅಲ್ಲ, ಅವರೇ ಸ್ವಿಂಗ್ ಉಸ್ತಾದ್ ಮೊಹಮ್ಮದ್ ಶಮಿ.

ಮುಂಬೈನ ವಾಂಖೆಡೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್ ನಿಜಕ್ಕೂ ಶಮಿಫೈನಲ್ ಎನಿಸಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸುವ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಭಾರತೀಯ ಬೌಲರ್ ಮಾಡಲಾಗದ ಸಾಧನೆ ಮಾಡಿದರು.
ಮೊಹಮ್ಮದ್ ಶಮಿ ಏಕದಿನ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಭಾರತದ ಪಾಲಿಗೆ ಹೀರೋ ಆಗಿದ್ದಾರೆ. ಆದರೆ, ತನ್ನ ವೈಯಕ್ತಿಕ ಜೀವನದಲ್ಲಿ ಅತಿಯಾಗಿ ನೊಂದಿರುವ ಮೊಹಮ್ಮದ್ ಶಮಿ ಒಂದಲ್ಲ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ ಕಾಲವೊಂದಿತ್ತು.

ರೋಹಿತ್ ಶರ್ಮಾ ಜೊತೆಗಿನ ಇನ್ಸ್ಟಾಗ್ರಾಮ್ ಚಾಟ್ನಲ್ಲಿ ಮೊಹಮ್ಮದ್ ಶಮಿ ಆತ್ಮಹತ್ಯೆಯ ಬಗ್ಗೆ ಬಹಿರಂಗಪಡಿಸಿದ್ದರು. ಭಾರತೀಯ ಬೌಲರ್ನ ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ಒಟ್ಟಿಗೆ ಬಂದವು, ಇದರಿಂದಾಗಿ ಅವರು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರು. ಈ ಎಲ್ಲ ಸಂಗತಿಗಳಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಇಂದು ವಿಶ್ವಕಪ್ನಲ್ಲಿ ತಮ್ಮ ಬೌಲಿಂಗ್ ಮೂಲಕ ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಿ ರೂಪುಗೊಂಡಿದ್ದಾರೆ.
2015ರ ಏಕದಿನ ವಿಶ್ವಕಪ್ ಬಳಿಕ ಗಾಯಗೊಂಡ ಮೊಹಮ್ಮದ್ ಶಮಿ ಮೈದಾನದಿಂದ ಹೊರಗಿದ್ದರು. ಇದಾದ ನಂತರ ಅವರ ಪತ್ನಿ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟರಲ್ಲಿ ಶಮಿ ಅವರಿಗೂ ಅಪಘಾತವಾಯಿತು.

2015ರ ನಂತರ ನಾನು ಗಾಯಗೊಂಡಾಗ ಮುಂದಿನ ಪಂದ್ಯವನ್ನು ಆಡಲು 18 ತಿಂಗಳು ಬೇಕಾಯಿತು ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ನಾನು ಪಂದ್ಯಕ್ಕೆ ಹಿಂದಿರುಗಿದಾಗ, ಕೆಲವು ದಿನಗಳ ನಂತರ ಕೌಟುಂಬಿಕ ಸಮಸ್ಯೆ ಇತ್ತು. ಅಪಘಾತ ಸಂಭವಿಸಿದಾಗ ಆ ಸಮಸ್ಯೆಗಳು ಇನ್ನೂ ದೊಡ್ಡವಾದವು ಎಂದಿದ್ದಾರೆ.
"ಆ ಸಮಯದಲ್ಲಿ ನನ್ನ ಕುಟುಂಬ ನನ್ನೊಂದಿಗೆ ಇರದಿದ್ದರೆ ನಾನು ನನ್ನ ಕ್ರಿಕೆಟ್ ಅನ್ನು ಕಳೆದುಕೊಳ್ಳಬಹುದಿತ್ತು ಎಂದು ಶಮಿ ಹೇಳಿದರು. ನನ್ನ ನಂಬಿ, ಆ ಅವಧಿಯಲ್ಲಿ ನನ್ನ ಮನಸಿನಲ್ಲಿ ಮೂರು ಸಲ ಆತ್ಮಹತ್ಯೆಯ ಯೋಚನೆ ಮಾಡಿದ್ದೆ. ಮನಸ್ಸಿನಲ್ಲಿ ಆ ಮಟ್ಟದ ಒತ್ತಡವಿತ್ತು. ಕ್ರಿಕೆಟ್ ಬಗ್ಗೆ ಯೋಚಿಸಲೇ ಇಲ್ಲ. ನಾನು ಯಾವುದೇ ತಪ್ಪು ಮಾಡದಂತೆ ನೋಡಿಕೊಳ್ಳಲು ನನ್ನ ಕುಟುಂಬದ ಸದಸ್ಯರು ಕೋಣೆಯೊಳಗೆ ಕಾವಲು ಕಾಯುತ್ತಿದ್ದರು," ಎಂದು ಬಹಿರಂಗಪಡಿಸಿದ್ದರು.
ಇಂತಹ ಸಂಕಷ್ಟಗಳನ್ನು ಎದುರಿಸಿದ ಮೊಹಮ್ಮದ್ ಶಮಿ ಮತ್ತೊಮ್ಮೆ ಕ್ರಿಕೆಟ್ಗೆ ಮರಳಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಸಂದರ್ಭದಲ್ಲಿ, ಅಂದರೆ ಅವರ ಪತ್ನಿಯೇ ಶಮಿ ವಿರುದ್ಧ ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದಾಗ, ಅವರ ವಾರ್ಷಿಕ ಒಪ್ಪಂದವನ್ನು ಬಿಸಿಸಿಐ ತಡೆಹಿಡಿದಿತ್ತು.
ನಂತರ, ಸುಳ್ಳು ಆರೋಪ ಎಂದು ಸಾಬೀತಾದ ಬಳಿಕ ಮತ್ತೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿತು. ಇದೆಲ್ಲವನ್ನೂ ಎದುರಿಸಿದ ಮೊಹಮ್ಮದ್ ಶಮಿ ಕ್ರಿಕೆಟ್ ಮೈದಾನದಲ್ಲಿ ಅತ್ಯದ್ಭುತವಾಗಿ ಪುನರಾಗಮನ ಮಾಡಿದರು.
2023ರ ವಿಶ್ವಕಪ್ನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ, ಅನಿವಾರ್ಯ ಕಾರಣದಿಂದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದು ತಂಡದ ಶಕ್ತಿ ಎನಿಸಿದ್ದಾರೆ. ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಬೌಲಿಂಗ್ನಲ್ಲಿಯೂ ಇತರರಿಗಿಂತ ಬಲಿಷ್ಠ ಎಂದು ಮೊಹಮ್ಮದ್ ಶಮಿ ತಮ್ಮ ತೀಕ್ಷ್ಣ ಬೌಲಿಂಗ್ನಿಂದ ಸಾಬೀತುಪಡಿಸಿದ್ದಾರೆ.
2023ರ ವಿಶ್ವಕಪ್ನ ಮೊದಲ ನಾಲ್ಕು ಪಂದ್ಯಗಳಲ್ಲಿ, ಮೊಹಮ್ಮದ್ ಶಮಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ ಮತ್ತು ಅವರು ಬೆಂಚ್ ಕಾಯಿಸುತ್ತಲೇ ಇದ್ದರು. ಆದರೆ ಬಾಂಗ್ಲಾದೇಶ ವಿರುದ್ಧದ ಟೀಂ ಇಂಡಿಯಾದ ನಾಲ್ಕನೇ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ, ಮೊಹಮ್ಮದ್ ಶಮಿ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಸೇರಿಸಿಕೊಳ್ಳಲಾಯಿತು.
ಇದೀಗ ಈ ವಿಶ್ವಕಪ್ನಲ್ಲಿ ಆಡಿದ 6 ಪಂದ್ಯಗಳಲ್ಲಿ 23 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಮೊದಲ ಸ್ಥಾನದಲ್ಲಿದ್ದಾರೆ.