ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂಡಿಯಾ ಓಪನ್ 2026 ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯ ವೇಳೆ ಅಸಾಮಾನ್ಯ ಅಡಚಣೆ ಕಾಣಿಸಿಕೊಂಡವು. ಇದು ಮೈದಾನದ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಪುರುಷರ ಸಿಂಗಲ್ಸ್ ಪಂದ್ಯದ ವೇಳೆ ಪಕ್ಷಿಗಳ ಹಿಕ್ಕೆಗಳು ಆಟಕ್ಕೆ ಅಡ್ಡಿ ಪಡಿಸಿದವು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕೋತಿಯೊಂದು ಕಾಣಿಸಿಕೊಂಡಿದ್ದರಿಂದ ಮೈದಾನ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಎದ್ದವು. ಗುರುವಾರ ಭಾರತದ ಎಚ್ಎಸ್ ಪ್ರಣಯ್ ಹಾಗೂ ಸಿಂಗಾಪುರದ ಎಂಟನೇ ಶ್ರೇಯಾಂಕದ ಲೋಹ್ ಕೀನ್ ಯೂ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಕಾದಾಟ ನಡೆಸಿದ್ದಾಗ ಎರಡು ಬಾರಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮೇಲ್ಚಾವಣಿಯಿಂದ ಹನಿಗಳು ಬಿದ್ದವು. ಆಗ ಅದನ್ನು ಕ್ಲೀನ್ ಮಾಡಿ ಆಟಕ್ಕೆ ಅನುವು ಮಾಡಿಕೊಡಲಾಗಿತ್ತು.

ಪ್ರಣಯ್ ಮೂರು ಪಂದ್ಯಗಳಲ್ಲಿ (21-18, 19-21, 14-21) ಸಿಂಗಾಪುರ ಆಟಗಾರನ ವಿರುದ್ಧ ಸೋಲು ಕಂಡರು. ಬಳಿಕ ಮಾತನಾಡಿದ ಅವರು ಪಕ್ಷಿಗಳ ಹಿಕ್ಕೆಗಳು ಬಿದ್ದು ಆಟಕ್ಕೆ ತೊಂದರೆಯಾಗಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.
ಪಂದ್ಯಗಳು ನಡೆಯುತ್ತಿದ್ದಾಗ ಮೈದಾನದಲ್ಲಿ ಕೋತಿಗಳು ಬಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದನ್ನು ಕಂಡು
ಕೊರಿಯನ್ ಆಟಗಾರ ಕಾಂಗ್ ಮಿನ್-ಹ್ಯುಕ್ ಅವರ ವೀಡಿಯೊ ಮಾಡಿದರು. ಪ್ರೇಕ್ಷಕರು ಕುಳಿತುಕೊಳ್ಳುವ ಸ್ಟ್ಯಾಂಡ್ನಲ್ಲಿ ಕೋತಿಯೊಂದು ಓಡಾಡುತ್ತಿರುವುದು ಅಲ್ಲಿ ನೆರೆದಿದ್ದವರ ಕುತೂಹಲಕ್ಕೆ ಕಾರಣವಾಯಿತು. ಈ ಬಗ್ಗೆ ಆಯೋಜಕರಾದ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿಕೆ ನೀಡಿದ್ದಾರೆ. ಕ್ರೀಡಾಂಗಣದ ಸುತ್ತಮುತ್ತ ಸಾಕಷ್ಟು ಮರಗಿಡಗಳು ಇರುವುದರಿಂದ ಮತ್ತು ಯಾವುದೋ ಬಾಗಿಲು ಕೋತಿ ಆಕಸ್ಮಿಕವಾಗಿ ಬಂದಿದೆ. ಈ ಘಟನೆ ದುರಾದೃಷ್ಟಕರ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಬ್ಯಾಡ್ಮಿಂಟನ್ ಸಂಸ್ಥೆ ಜೊತೆ ಕೆಲಸ ಮಾಡುವುದಾಗಿ ಬಿಡಬ್ಲ್ಯೂಎಫ್ ಭರವಸೆ ನೀಡಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ಲೋಪಗಳನ್ನು ಸರಿಪಡಿಸಲು ನಾವು ಬದ್ಧರಾಗಿದ್ದೇವೆ. ಅಲ್ಲದೆ ಆಟಗಾರರ ಹಿತದ ದೃಷ್ಟಿಯಿಂದ ಟೀಕೆಗಳನ್ನು ಸಹ ಸ್ವಾಗತಿಸುತ್ತೇವೆ ಎಂದು ಬಿಡಬ್ಲ್ಯೂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ ತಿಂಗಳಲ್ಲಿ ದೆಹಲಿಯು ಬ್ಯಾಡ್ಮಿಂಟನ್ ಆಟಕ್ಕೆ ಯೋಗ್ಯವಾದ ನಗರವಲ್ಲ ಎಂದು ವಿಶ್ವದ 2ನೇ ಶ್ರೇಯಾಂಕದ ಆಟಗಾರ ಆಂಡರ್ಸ್ ಆಂಟೋನ್ಸೆನ್ ತಿಳಿಸಿದ್ದಾರೆ. ಇವರು ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯದ ಕಾರಣದಿಂದ ಹಿಂದೆ ಸರಿದಿದ್ದಾರೆ. ದೆಹಲಿಯ ವಾತಾವರಣದ ಬಗ್ಗೆ ಸಿಂಗಾಪುರದ ಸ್ಟಾರ್ ಆಟಗಾರ ಲೋ ಕೀನ್ ಯೂ ಸಹ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಮಾಸ್ಕ್ ಹಾಕಿಕೊಳ್ಳುತ್ತಿದ್ದೇನೆ. ಅವಶ್ಯಕತೆ ಇದ್ದಾಗ ಮಾತ್ರ ನಾನು ಹೋಟೆಲ್ ರೂಮ್ ಬಿಟ್ಟು ಹೊರಗಡೆಗೆ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.