ಎಂಎಸ್ ಧೋನಿಯನ್ನು ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತಿನ ಪ್ರಮುಖರು ಕರೆಯುವುದು 'ಕ್ಯಾಪ್ಟನ್ ಕೂಲ್' ಎಂದು. ಎಂತಹದ್ದೇ ಒತ್ತಡದ ಸನ್ನಿವೇಶ ಇದ್ದರೂ, ಪಂದ್ಯಗಳನ್ನು ಸೋಲು ಹಂತದಲ್ಲಿದ್ದರೂ, ಕೊಹ್ಲಿ ಐಸ್ನಂತೆ ಕೂಲಾಗಿ ಇರೋದನ್ನ ನೋಡಿದ್ದೇವೆ. ಎಷ್ಟೋ ಸೋಲುವ ಪಂದ್ಯಗಳನ್ನು ಕೊನೆ ಹಂತದಲ್ಲಿ ಗೆಲ್ಲಿಸಿದ್ದು ಕೂಡ ಇದೆ.
ಅಂತಹ ಧೋನಿ ಈ ಬಾರಿ ಐಪಿಎಲ್ನಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡಿದ್ದಾರಾ ಎನ್ನುವ ಅನುಮಾನ ಕಾಡದೇ ಇರದು. ಹೌದು, ಗುರುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಎರಡು ಬಾರಿ ತಮ್ಮ ತಾಳ್ಮೆ ಕಳೆದುಕೊಂಡರು.

ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಧೋನಿ ಹದಿನಾರನೇ ಓವರ್ ನಲ್ಲಿ ಮೊದಲು ಕೋಪಗೊಂಡರು. ಬ್ಯಾಟರ್ ಚೆಂಡನ್ನು ಹಿಂದಕ್ಕೆ ಹೊಡೆದು ರನ್ ಕದಿಯಲು ಯತ್ನಿಸಿದರು, ಮಹೇಂದ್ರ ಸಿಂಗ್ ಧೋನಿ ನಾನ್ಸ್ಟ್ರೈಕರ್ ಎಂಡ್ಗೆ ವಿಕೆಟ್ಗೆ ಗುರಿಯಿಟ್ಟು ಥ್ರೋ ಎಸೆದರು, ಆದರೆ ಪಿಚ್ನ ಮಧ್ಯದಲ್ಲಿ ನಿಂತಿದ್ದ ಮಥೀಶ ಪತಿರಾನ ಚೆಂಡನ್ನು ಹಿಡಿಯಲು ಯತ್ನಿಸಿ ಅಡ್ಡಿಪಡಿಸಿದರು. ಇದರಿಂದ ಬ್ಯಾಟರ್ ಸುಲಭವಾಗಿ ಕ್ರೀಸ್ಗೆ ಬಂದರು, ಪತಿರಾನ ಚೆಂಡನ್ನು ತಡೆಯದಿದ್ದರೆ, ಅಕಸ್ಮಾತ್ ಅದು ವಿಕೆಟ್ಗೆ ಬಿದ್ದಿದ್ದರೆ ಬ್ಯಾಟರ್ ಔಟಾಗಿರುತ್ತಿದ್ದರು, ಇದರಿಂದ ಧೋನಿ ಸಿಡಿಮಿಡಿಗೊಂಡು ಪತಿರಾನ ಕಡೆ ನೋಡಿದರು.
ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಧೋನಿ ಮತ್ತೊಮ್ಮೆ ಕೋಪಿಸಿಕೊಂಡರು. ದೇವದತ್ ಪಡಿಕ್ಕಲ್ ಅವರು ಗಾಳಿಯಲ್ಲಿ ಪ್ರಬಲವಾದ ಹೊಡೆತದ ಮೂಲಕ ಲೆಗ್ಸೈಡ್ನಲ್ಲಿ ಇನ್ಫೀಲ್ಡ್ ಅನ್ನು ಕ್ಲಿಯರ್ ಮಾಡಿದರು, ಆದರೆ ಶಿವಂ ದುಬೆ ಚೆಂಡನ್ನು ಹಿಡಿದು ಎಸೆದರು, ಆದರೆ ಅವರು ಸರಿಯಾಗಿ ಥ್ರೋ ಮಾಡದ ಕಾರಣ ಬ್ಯಾಟರ್ ಗಳು ಮೂರು ರನ್ ಗಳಿಸಿದರು. ಇದು ಧೋನಿ ಕೋಪವನ್ನು ನೆತ್ತಿಗೇರಿಸಿತ್ತು, ಶಿವಂ ದುಬೆ ವಿರುದ್ಧ ಕೋಪಗೊಂಡ ಧೋನಿ ಕಣ್ಣಲ್ಲೇ ವಾರ್ನಿಂಗ್ ಕೊಟ್ಟರು.
ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 32 ರನ್ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಈ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಟಿ20 ಕ್ರಿಕೆಟ್ನಲ್ಲಿ 200ಕ್ಕಿಂತ ಹೆಚ್ಚು ರನ್ ದಾಖಲಾಯಿತು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 43 ಎಸೆತಗಳಲ್ಲಿ 77 ರನ್ ಗಳಿಸಿ ಮಿಂಚಿದರು. ಧ್ರುವ್ ಜುರೆಲ್ ಮತ್ತು ದೇವದತ್ ಪಡಿಕ್ಕಲ್ ಕೊನೆಯ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಗಳಿಸುವ ಮೂಲಕ 32 ರನ್ಗಳಿಂದ ಸೋಲೊಪ್ಪಿಕೊಂಡಿತು.