
ನವದೆಹಲಿ, ಜೂನ್ 18: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದಲ್ಲಿ ಇರದಿದ್ದರೆ ಅವರ ಅನುಪಸ್ಥಿತಿ ತಂಡದ ಮೇಲೆ, ಪಂದ್ಯದ ಮೇಲೆ ಸಣ್ಣದಾಗಿಯಾದರೂ ಪ್ರಭಾವ ಬೀರುವುದಷ್ಟೇ ಅಲ್ಲ, ಯುವ ಆಟಗಾರರಿಗೆ ಧೋನಿಯಿಂದ ಸಿಗುತ್ತಿದ್ದ ಮೌಲ್ಯಯುತ ಮಾರ್ಗದರ್ಶನವೂ ತಪ್ಪುತ್ತದೆ.
2019ರ ವಿಶ್ವಕಪ್ ಬಳಿಕ ಧೋನಿ ಯಾವುದೇ ಪಂದ್ಯಾವನ್ನೂ ಆಡಿಲ್ಲ. ವಿಶ್ವಕಪ್ ಬಳಿಕ ಬಿಡುವು ಬೇಕೆಂದು ಸ್ವ-ನಿರ್ಧಾರ ತಾಳಿದ್ದ ಧೋನಿ, ಆ ಬಳಿಕ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತಂಡಕ್ಕೆ ಧೋನಿ ವಾಪಸ್ಸಾಗದಿದ್ದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಭಾರತದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಕುಲದೀಪ್, ತಂಡದಲ್ಲಿನ ಧೋನಿ ಅನುಪಸ್ಥಿತಿ ತನ್ನ ಮೇಲೆ ಪ್ರಭಾವ ಬೀರಿದೆ. ಆದರೆ ತನ್ನ ಸ್ವಂತ ಆಟದ ಬಗ್ಗೆಯೂ ತನಗೆ ಸಾಕಷ್ಟು ನಂಬಿಕೆಯಿದೆ. ಆ ನಂಬಿಕೆಯೇ ತನ್ನನ್ನು ಧೋನಿಯ ಅನುಪಸ್ಥಿತಿಯನ್ನೂ ನಿಭಾಯಿಸುವಂತೆ ಮಾಡಿದೆ ಎಂದಿದ್ದಾರೆ.
'ವಿಶ್ವಕಪ್ ಬಳಿಕ ಮಾಹಿ ಭಾಯಿ ಯಾವುದೇ ಪಂದ್ಯವನ್ನಾಡಿಲ್ಲವಾದ್ದರಿಂದ ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾನು ಧೋನಿಯನ್ನು ಅವಲಂಭಿಸಿದ್ದೀನೋ ಇಲ್ಲವೋ ಎನ್ನುವುದನ್ನು ಈ ಅವಧಿಯೇ ನಿಮಗೆ ಹೇಳುತ್ತದೆ. ಕ್ರಿಕೆಟ್ ಒಂದು ತಂಡದ ಆಟವಾದ್ದರಿಂದ ನಾನು ನನ್ನ ಆಟವನ್ನು ಉತ್ತಮಗೊಳಿಸುವಲ್ಲಿ ದುಡಿಯುತ್ತಿದ್ದೇನೆ,' ಎಂದು ಕುಲದೀಪ್ ಹೇಳಿದ್ದಾರೆ.