ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)ಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಸ್ಟಾರ್ ಪ್ಲೇಯರ್ ಮಹೇಂದ್ರ ಸಿಂಗ್ ಧೋನಿ ಗಾಯದ ಕಾರಣದಿಂದ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಇವರು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಮೂಲಕ ಚೆನ್ನೈ ಅಭಿಮಾನಿಗಳ ಬಹು ದಿನಗಳ ಕಾಯುವಿಕೆ ಕೊನೆಯಾಗುವ ಸಾಧ್ಯತೆ ಇದೆ.
ಮಂಗಳವಾರ ರಾತ್ರಿ ಮಹೇಂದ್ರ ಸಿಂಗ್ ಧೋನಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಬೆವರು ಹರಿಸಿದರು. ಇವರು ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದರು. 44 ವರ್ಷದ ಧೋನಿ ಅವರು ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆರಂಭಿಕ ಪಂದ್ಯಗಳಲ್ಲಿ ತಂಡದ ಭಾಗವಾಗಿರಲಿಲ್ಲ. ಧೋನಿ ಇತ್ತಿಚೆಗೆ ಎಸ್ಆರ್ಎಚ್ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಿ ಗಮನ ಸೆಳೆದಿದ್ದರು.

ಧೋನಿ ಅನುಪಸ್ಥಿತಿ ಸಿಎಸ್ಕೆಗೆ ಬಹುವಾಗಿ ಕಾಡುತ್ತಿದೆ. ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಆಡಿದ 6 ಪಂದ್ಯಗಳಲ್ಲಿ 2 ಗೆಲುವು, 4 ಸೋಲು ಕಂಡಿದೆ. ಪ್ಲೇ ಆಫ್ ಆಸೆ ಸುಗಮವಾಗಿಸಲು ಮುಂದಿನ ಎಲ್ಲ ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.
ಮಂಗಳವಾರ ಚೆನ್ನೈ ಒಂದು ವಿಡಿಯೋವನ್ನು ಹಂಚಿಕೊಂಡಿದೆ, ಅದರಲ್ಲಿ ಮಹಿ ಅಭ್ಯಾಸದ ಸಮಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಈ ಹಿಂದೆಯೂ ಫ್ರಾಂಚೈಸಿ ಮಾಹಿ ಅಭ್ಯಾಸ ಮಾಡುವ ವಿಡಿಯೋ ಹಂಚಿಕೊಂಡಿತ್ತು. ಆದರೆ ಆಗ ವಿಕೆಟ್ ಕೀಪಿಂಗ್ ಮಾಡುವ ದೃಶ್ಯಗಳು ಕಂಡು ಬಂದಿರಲಿಲ್ಲ. ಮಂಗಳವಾರ ಧೋನಿ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿದ್ದ ಅಭಿಮಾನಿಗಳಲ್ಲಿ ಉತ್ಸಾಹ ಮನೆ ಮಾಡಿದೆ.
ಚೆನ್ನೈ ತಂಡಕ್ಕೆ ಗಾಯವು ಬಹುವಾಗಿ ಕಾಡಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಯುಷ್ ಮಾತ್ರೆ ಗಾಯಕ್ಕೆ ತುತ್ತಾಗಿದ್ದರು. ಇವರು ಗಾಯ ತೀವ್ರವಾಗಿದ್ದು ಇವರು ಈ ಐಪಿಎಲ್ನಿಂದ ಹೊರ ನಡೆದಿದ್ದಾರೆ. ಇವರು ಸಿಎಸ್ಕೆ ಪರ ಈ ಲೀಗ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಆಯುಷ್ ಈ ಲೀಗ್ನಲ್ಲಿ ಆಡಿದ 6 ಪಂದ್ಯಗಳಲ್ಲಿ 201 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೂ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ವಿಲ್ ಜಾಕ್ಸ್ ಎಂಟ್ರಿ ನೀಡಿದ್ದು, ತಂಡದ ಬಲವನ್ನು ಹೆಚ್ಚಿಸಿದೆ. ಇವರು ಸದ್ಯ ಟಿ20 ಮಾದರಿ ಕ್ರಿಕೆಟ್ನಲ್ಲಿ ಅಮೋಘ ಲಯದಲ್ಲಿದ್ದಾರೆ. ಇವರು ತಂಡಕ್ಕೆ ಸೇರಿದ್ದರಿಂದ ಗೆಲುವಿನ ಆಸೆ ಹೆಚ್ಚಿದೆ.