MS Dhoni: ಸಿಎಸ್ಕೆ ಮ್ಯಾನೇಜ್ಮೆಂಟ್ ಅಭಿಮಾನಿಗಳ ದಾರಿ ತಪ್ಪಿಸಿದೆ ಎಂದ ಶ್ರೀಕಾಂತ್ ಕಿಡಿ
19ನೇ ಆವೃತ್ತಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿವೆ. ಭಾನುವಾರ ಲೀಗ್ ಹಂತಕ್ಕೆ ತೆರೆ ಬೀಳಲಿದೆ. ಈ ವೇಳೆ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಲೀಗ್ ಹಂತದಲ್ಲೇ ಈ ಆವೃತ್ತಿಯಿಂದ ಹೊರ ನಡೆದಿದೆ. ಸಿಎಸ್ಕೆ ಅಭಿಮಾನಿಗಳಿಗೆ ಒಂದು ಕಡೆಯಲ್ಲಿ ನೋವು, ಇನ್ನೊಂದು ಬದಿಯಲ್ಲಿ ಸಿಎಸ್ಕೆಯ ಐಕಾನಿಕ್ ಪ್ಲೇಯರ್ ಮಹೇಂದ್ರ ಸಿಂಗ್ ಧೋನಿ ಈ ಲೀಗ್ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕೆ ಇಳಿಯದೇ ಇರುವುದು ಮತ್ತೊಂದು ನೋವಿನ ವಿಚಾರವಾಗಿದೆ.
ಐಪಿಎಲ್ 2026ರಲ್ಲಿ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಗಾಯದಿಂದಾಗಿ ಈ ಸಂಪೂರ್ಣ ಋತುವಿನಲ್ಲಿ ಮೈದಾನದಿಂದ ಹೊರಗುಳಿಯಬೇಕಾಗಿ ಬಂದಿದ್ದು, ಸಿಎಸ್ಕೆ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಡಳಿತ ಮಂಡಳಿ ನೀಡಿದ್ದ ಮಾಹಿತಿ ಪ್ರಕಾರ, ಟೂರ್ನಿ ಆರಂಭಕ್ಕೂ ಮುನ್ನ ಧೋನಿಗೆ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಎರಡು ವಾರಗಳ ವಿಶ್ರಾಂತಿ ಅಗತ್ಯವಿತ್ತು. ಚೇತರಿಕೆ ಕಾಣುತ್ತಿದ್ದಾಗ ಮತ್ತೆ ಅವರಿಗೆ ಗಾಯ ಕಾಣಿಸಿಕೊಂಡಿತ್ತು ಎಂದು ತರಬೇತುದಾರರು ತಿಳಿಸಿದ್ದಾರೆ. ಪರಿಣಾಮ ಇವರು ಒಂದೇ ಒಂದು ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿಲ್ಲ.

ಸಿಎಸ್ಕೆ ತಂಡದ ಕೊನೆಯ ತವರು ಪಂದ್ಯಕ್ಕೂ ಮುನ್ನ, ಧೋನಿಗೆ ಹೆಬ್ಬೆರಳಿಗೆ ಗಾಯವಾಗಿದೆ ಎಂದು ಆಡಳಿತ ಮಂಡಳಿ ಹೇಳಿಕೆ ನೀಡಿತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್ಕೆ ಅಂತಿಮ ಪಂದ್ಯಕ್ಕಾಗಿ ಧೋನಿ ಮೈದಾನಕ್ಕೆ ಬಂದಿದ್ದರೂ, ಆದರೆ ಕಣಕ್ಕೆ ಇಳಿಯಲಿಲ್ಲ. ಇವರ ಅನುಪಸ್ಥಿತಿ ಬರೀ ಫೋಟೋ ಸೆಷನ್ಗೆ ಮಾತ್ರ ಸೀಮಿತವಾಗಿತ್ತು.
ಶ್ರೀಕಾಂತ್ ಕಿಡಿ
ಸಿಎಸ್ಕೆ ಪ್ಲೇ ಆಫ್ ಪ್ರವೇಶಿಸಿದರೆ ಮಹೇಂದ್ರ ಸಿಂಗ್ ಧೋನಿ ತಂಡದೊಂದಿಗೆ ಕಣಕ್ಕೆ ಇಳಿಯುತ್ತಾರೆ ಎಂದು ಮೈಕ್ ಹಸಿ ತಿಳಿಸಿದ್ದರು. ಆದರೆ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ಸಾಧಿಸಿ, ಸಿಎಸ್ಕೆ ಆಸೆಗೆ ಕೊಳ್ಳಿ ಇಟ್ಟಿತು. ಈ ಪಂದ್ಯಕ್ಕೂ ಮುನ್ನವೇ ಧೋನಿ ತಂಡದ ಶಿಬಿರದಿಂದ ಹೊರನಡೆದಿದ್ದರು ಎಂಬ ಸುದ್ದಿಗಳು ಬಂದಿವೆ. ಮೈದಾನ ಮತ್ತು ತಂಡದಲ್ಲಿನ ಧೋನಿ ಗೈರುಹಾಜರಿಯು ಸಿಎಸ್ಕೆ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದ್ದು ಸ್ಪಷ್ಟ.

1983ರ ವಿಶ್ವಕಪ್ ವಿಜೇತ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಸಿಎಸ್ಕೆ ಆಡಳಿತ ಮಂಡಳಿಯ ವಿರುದ್ಧ ಹರಿ ಹಾಯ್ದಿದ್ದಾರೆ. ಮ್ಯಾನೇಜ್ಮೆಂಟ್ ಧೋನಿ ಮುಂದಿನ ಆಡಲು ಸಿದ್ಧವಾಗುತ್ತಾರೆ ಎಂದು ಹೇಳುತ್ತಲೇ ಇತ್ತು. ನಂತರ, ನೆಟ್ಸ್ನಲ್ಲಿ ಧೋನಿ ಅಭ್ಯಾಸ ಮಾಡುವ ವೀಡಿಯೊಗಳನ್ನು ಹಾಕಿ ಅಭಿಮಾನಿಗಳ ದಾರಿ ತಪ್ಪಿಸಿದೆ. ಅಲ್ಲದೆ ಗಾಯದ ಚೇತರಿಕೆಯ ಬಗ್ಗೆಯೂ ಅರೆಬರೆ ಮಾಹಿತಿ ನೀಡುತ್ತಿತ್ತು. ಆದರೆ ಈ ಅವಧಿಯಲ್ಲಿ ಧೋನಿ ಪೂರ್ತಿ ಸೀಸನ್ ಆಡುವುದಿಲ್ಲ ಎಂದು ನೇರವಾಗಿ ಹೇಳಲೇ ಇಲ್ಲ.
ಸಿಎಸ್ಕೆ ಮ್ಯಾನೇಜ್ಮೆಂಟ್ ತನ್ನ ನಿರ್ಧಾರವನ್ನು ಪ್ರಕಟಿಸಿದ್ದರೆ, ಅಭಿಮಾನಿಗಳು ಸಹ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. ರುತುರಾಜ್ ಗಾಯಕ್ವಾಡ್ ಸಹ ದಿನಗಳನ್ನು ದೂಡುತ್ತಲೇ ಬಂದರು. ಆಡಳಿತ ಮಂಡಳಿ ಮತ್ತು ನಾಯಕ ನೇರವಾಗಿ ವಿಷಯವನ್ನು ಹೇಳಬೇಕಿತ್ತು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಕಿಡಿಕಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications