
ನವದೆಹಲಿ, ಜುಲೈ 25: ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ನಿರ್ಧರಿಸಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, 15 ದಿನಗಳ ಕಾಲ ಕಾಶ್ಮೀರದಲ್ಲಿ ಗಸ್ತು ತಿರುಗುವ ಮತ್ತು ಕಾವಲು ಕಾಯುವ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾರತೀಯ ಸೇನೆ ಗುರುವಾರ (ಜುಲೈ 25) ಹೇಳಿಕೆ ಮೂಲಕ ಈ ವಿಚಾರ ತಿಳಿಸಿದೆ.
ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುವ ಬದಲು ಸೇನಾ ಕಾರ್ಯದಲ್ಲಿ ತೊಡಗುವ ನಿರ್ಧಾರ ತಾಳಿದ್ದ ಧೋನಿ, ಜುಲೈ 31ರಿಂದ ಕಾಶ್ಮೀರದಲ್ಲಿ ಸೇವೆಯಲ್ಲಿ ತೊಡಗಲಿದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ ಆಗಸ್ಟ್ 15ರ ವರೆಗೂ ಅಲ್ಲೇ ಇರಲಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.
'ಗೌರವ ಲೆಫ್ಟಿನೆಂಟ್ ಕರ್ನಲ್ ಧೋನಿ, 106 ಆರ್ಮಿ ಬೆಟಾಲಿಯನ್(ಪ್ಯಾರ)ನಲ್ಲಿ ಜುಲೈ 31ರಿಂದ ಆಗಸ್ಟ್ 15ರ ವರೆಗೆ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ,' ಎಂದು ಸೇನೆ ಹೇಳಿಕೆ ಮೂಲಕ ತಿಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ವಿಕ್ಟರ್ ಫೋರ್ಸ್ನ ಭಾಗವಾಗಿಯೂ ದೋನಿ ಸೇವೆ ಸಲ್ಲಿಸಲಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.
'ಸೇನಾಧಿಕಾರಿಗಳು ಕೋರಿಕೊಂಡಿದ್ದಕ್ಕೆ ಸೇನಾ ಮುಖ್ಯಕಚೇರಿಯಿಂದ ಅನುಮೋದನೆ ದೊರೆತಿರುವುದರಿಂದ ಧೋನಿ ಇನ್ನು ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಕೆಲಸದಲ್ಲಿ ತೊಡಗಲಿದ್ದು, ಸೇನಾ ಪಡೆಗಳ ಜೊತೆ ತಂಗಲಿದ್ದಾರೆ,' ಎಂದು ಸೇನಾ ಹೇಳಿಕೆ ತಿಳಿಸಿದೆ.