ಟೀಮ್ ಇಂಡಿಯಾದ ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕ್ರಿಕೆಟ್ ಹೊರತಾಗಿಯೂ ತಮ್ಮ ವಿಶೇಷ ಅಭಿರುಚಿಗಳಿಗಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೃಷಿ ಮೇಲಿನ ತಮ್ಮ ಒಲವು, ಕುಕ್ಕುಟೋದ್ಯಮ, ಇತ್ತೀಚೆಗೆ ಚಲನಚಿತ್ರ ನಿರ್ಮಾಣ ಸಂಸ್ಥೆ ಆರಂಭ ಹೀಗೆ ಧೋನಿಯ ಒಲವೇ ಭಿನ್ನ ವಿಭಿನ್ನ. ಇವುಗಳಲ್ಲಿ ಒಂದು ಅವರ ಬೈಕ್ ಹಾಗೂ ಕಾರುಗಳ ಮೇಲಿನ ಪ್ರೀತಿ.
ಮಾಹಿಯ ಕಾರ್ ಬೈಕ್ಗಳ ಸಂಗ್ರಹದ ಬಗ್ಗೆ ಭಾರತೀಯ ಅಭಿಮಾನಿಗಳಿಗೆ ಈಗಾಗಲೇ ಮಾಹಿತಿ ಇದ್ದೇ ಇದೆ. ಆದರೆ ಇದನ್ನು ಕಣ್ಣಾರೆ ಕಂಡು, ಸ್ವತಃ ಧೋನಿ ಜೊತೆಗೆ ಬೆರೆತು ಅವುಗಳ ಬಗ್ಗೆ ಮಾತನಾಡಿ ಬೆರಗಾಗಿದ್ದಾರೆ ಕರ್ನಾಟಕದ ದಿಗ್ಗಜ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಹಾಗೂ ಸುನಿಲ್ ಜೋಷಿ. ಮಾಹಿ ತವರೂರು ರಾಂಚಿಗೆ ತೆರಳಿರುವ ಸುನಿಲ್ ಜೋಷಿ ಹಾಗೂ ವೆಂಕಟೇಶ್ ಪ್ರಸಾದ್ ಧೋನಿ ಜೊತೆಗೆ ಕಾಲಕಳೆದಿದ್ದಾರೆ.

ವೆಂಕಟೇಶ್ ಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎಂಎಸ್ ಧೋನಿ ಜೊತೆಗೆ ವೆಂಕಟೇಶ್ ಪ್ರಸಾದ್ ಹಾಗೂ ಸುನಿಲ್ ಜೋಷಿ ಆತ್ಮೀಯವಾಗಿ ಮಾತನಾಡುತ್ತಿದ್ದು ವೆಂಕಟೇಶ್ ಪ್ರಸಾದ್ ಹಾಗೂ ಸುನಿಲ್ ಜೋಷಿ ಇಬ್ಬರು ಕೂಡ ಧೋನಿ ಬೈಕ್ ಸಂಗ್ರಗಳ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಧೋನಿ ಬೈಕ್ ಹಾಗೂ ಕಾರುಗಳಿಗಾಗಿ ಮೀಸಲಿಟ್ಟಿರುವ ಕಟ್ಟಡದ ಮುಂದೆಯೇ ನಿಂತು ಈ ವಿಡಿಯೋ ಮಾಡಲಾಗಿದೆ.
ರಾಂಚಿಗೆ ತೆರಳಿ ಧೋನಿ ನಿವಾಸಕ್ಕೆ ತೆರಳಿರುವ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಹಾಗೂ ಸುನಿಲ್ ಜೋಷಿ ರಾಂಚಿಗೆ ನಾಲ್ಕೈದು ಬಾರಿ ಆಗಮಿಸಿದ್ದರೂ ಧೋನಿ ಜೊತೆಗೆ ಇಲ್ಲಿ ಕಾಲ ಕಳೆಯುತ್ತಿರುವುದು ಮೊದಲ ಬಾರಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಧೋನಿಯ ಈ ಬೈಕ್ ಸಂಗ್ರಹವನ್ನು ನೋಡಿ ವೆಂಕಟೇಶ್ ಪ್ರಸಾದ್ ಇದು ನಿಜಕ್ಕೂ ಕ್ರೇಜಿ ಎಂದು ಉದ್ಘರಿಸಿದ್ದಾರೆ. ಹುಚ್ಚುತನ ಇಲ್ಲದಿದ್ದರೆ ಇಂಥಾದ್ದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ವೆಂಕಟೇಶ್ ಪ್ರಸಾದ್. ಇನ್ನು ಇದನ್ನು ವಿವರಿಸಲು ಪದಗಳಿಲ್ಲ ಎಂದು ಸುನಿಲ್ ಜೋಷಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಧೋನಿ ತಮ್ಮಲ್ಲಿರುವ ಬೈಕ್ಗಳಿಗಾಗಿ ಒಂದು ಬೃಹತ್ ಕಟ್ಟಡವನ್ನು ಮೀಸಲಿಟ್ಟಿದ್ದು ಅದರಲ್ಲಿ ಸಂಪೂರ್ಣವಾಗಿ ಬೈಕ್ಗಳನ್ನು ಸಂಗ್ರಹಿಸಿಡಲಾಗಿದೆ. ಈ ಬಗ್ಗೆ ಧೋನಿ ಮಾತನಾಡಿದ್ದು "ನಾನು ಬಹಳ ಇಷ್ಟಪಡುವುದು ಇವುಗಳನ್ನು ಹಾಗಾಗಿ ಇವುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್ನ ಆಚೆ ಮಾಡಲು ನಿರ್ಧರಿಸಲಾಗಿತ್ತು. ಇಲ್ಲ ಇದು ಇಲ್ಲಿಯೇ ಬೇಕು ಎಂದು ನಾನು ಹೇಳಿ ಇಲ್ಲಿ ಮಾಡಿಸಿದ್ದೆ" ಎಂದಿದ್ದಾರೆ ಎಂಎಸ್ ಧೋನಿ.
ಇನ್ನು ಈ ಬಗ್ಗೆ ಟ್ವೀಟ್ನಲ್ಲಿ ವೆಂಕಟೇಶ್ ಪ್ರಸಾದ್ "ಒಬ್ಬ ವ್ಯಕ್ತಿಯಲ್ಲಿ ನಾನು ಕಂಡಿರುವ ಕ್ರೇಜಿಯೆಸ್ಟ್ ಪ್ಯಾಶನ್ ಇದು. ಎಂಥಾ ಸಂಗ್ರಹ ಇದು, ಎಂಎಸ್ಡಿ ಅಂದರೆ ಎಂಥಾ ಅದ್ಭುತ ವ್ಯಕ್ತಿ. ಅದ್ಭುತ ಸಾಧಕ ಹಾಗೂ ಅದಕ್ಕಿಂತಲೂ ಹೆಚ್ಚಿನ ಶ್ರೇಷ್ಠ ವ್ಯಕ್ತಿತ್ವ. ರಾಂಚಿಯ ಅವರ ಮನೆಯಲ್ಲಿರುವ ಬೈಕ್ ಹಾಗೂ ಕಾರುಗಳ ಸಂಗ್ರಹದ ಚಿತ್ರಣ ಇದು" ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.