ಭಾರತದಲ್ಲಿಯೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭಾರತದ ಮಾಜಿ ಕೀಪರ್-ಬ್ಯಾಟರ್ ಮತ್ತು ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ತಮ್ಮ ಆದ್ಯತೆಯ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ.
ಎಂಎಸ್ಕೆ ಪ್ರಸಾದ್ ಅವರ ವಿಶ್ವಕಪ್ ಭಾರತ ತಂಡದಲ್ಲಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಕೊನೆಯ ಬಾರಿಗೆ ತವರಿನಲ್ಲಿ ಆಡಿದಾಗ ಗೆದ್ದಿತ್ತು. ಅದೇ ಸಾಧನೆಯನ್ನು ಪುನರಾವರ್ತಿಸಲು ಎಂಎಸ್ಕೆ ಪ್ರಸಾದ್ ಎದುರು ನೋಡುತ್ತಿದ್ದಾರೆ. ಈ ಬಾರಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
ಈಗಾಗಲೇ ಹಲವು ಮಾಜಿ ಭಾರತೀಯ ಕ್ರಿಕೆಟಿಗರು 2023ರ ಏಕದಿನ ವಿಶ್ವಕಪ್ಗೆ ತಮ್ಮ ಆದ್ಯತೆಯ 15 ಸದಸ್ಯರ ತಂಡವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸ್ಟಾರ್ ಸ್ಪೋರ್ಟ್ಸ್ನ ವಿಡಿಯೋದಲ್ಲಿ, ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಕೂಡ ತಮ್ಮ 15ರ ಬಳಗವನ್ನು ಬಹಿರಂಗಪಡಿಸಿದ್ದಾರೆ.

ವಿಶ್ವಕಪ್ ಭಾರತ ತಂಡದಲ್ಲಿ ಎಂಎಸ್ಕೆ ಪ್ರಸಾದ್ ಅವರ ಆದ್ಯತೆಯ ತಂಡದಲ್ಲಿ ದೊಡ್ಡ ಆಶ್ಚರ್ಯವೆಂದರೆ ಜನವರಿ 2022ರಿಂದ ಏಕದಿನ ಪಂದ್ಯವಾಡದ ಆಡದ ರವಿಚಂದ್ರನ್ ಅಶ್ವಿನ್ ಅವರನ್ನು ಸೇರಿಸಿಕೊಂಡಿರುವುದು.
ಅಲ್ಲದೆ, ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಇಬ್ಬರು ಮಣಿಕಟ್ಟಿನ ಸ್ಪಿನ್ನರ್ಗಳ ನಡುವೆ ಒಬ್ಬರನ್ನು ಆಯ್ಕೆ ಮಾಡುವುದಾಗಿ 48 ವರ್ಷದ ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ.
ಟಿ20 ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಎಂಎಸ್ಕೆ ಪ್ರಸಾದ್ ಅವರ ವಿಶ್ವಕಪ್ನ 15 ಸದಸ್ಯರ ಭಾರತ ತಂಡದಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಜೊತೆಗೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಾಜಿ ವಿಕೆಟ್ ಕೀಪರ್ ಆಗಿರುವ ಎಂಎಸ್ಕೆ ಪ್ರಸಾದ್ ಅವರು ಇಶಾನ್ ಕಿಶನ್ ಅವರನ್ನು ಸಂಜು ಸ್ಯಾಮ್ಸನ್ಗೆ ಮುನ್ನ ಕೆಎಲ್ ರಾಹುಲ್ಗೆ ಬ್ಯಾಕಪ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ.
2023ರ ವಿಶ್ವಕಪ್ಗೆ ಎಂಎಸ್ಕೆ ಪ್ರಸಾದ್ ಆಯ್ಕೆಯ ಭಾರತದ 15 ಸದಸ್ಯರ ಬಳಗ
ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್/ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಎಂಎಸ್ಕೆ ಪ್ರಸಾದ್ ಅವರಿಗಿಂತ ಮೊದಲು, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, 1983ರ ವಿಶ್ವಕಪ್ ವಿಜೇತ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು 2023ರ ವಿಶ್ವಕಪ್ಗೆ ತಮ್ಮ ಆದ್ಯತೆಯ ಭಾರತದ 15 ಸದಸ್ಯರ ತಂಡವನ್ನು ಹೆಸರಿಸಿದ್ದಾರೆ.
ಭಾರತ ತಂಡವು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಬಳಿಕ ಅಕ್ಟೋಬರ್ 14ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿಯ ಹೈ-ವೋಲ್ಟೇಜ್ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದಕ್ಕೂ ಮುನ್ನ ಭಾರತ ತಂಡವು ತನ್ನ 2023ರ ಏಷ್ಯಾ ಕಪ್ ಅಭಿಯಾನವನ್ನು ಸೆಪ್ಟೆಂಬರ್ 2ರಂದು ಪಲ್ಲೆಕೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ.