
ಭಾರತದ ಹೊಸ ವೇಗದ ಬೌಲಿಂಗ್ ಸೆನ್ಸೇಶನ್ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ಸ್ಪೆಲ್ನಲ್ಲಿ ದುಬಾರಿಯಾದರೂ ಬಳಿಕ ಪ್ರಸಿದ್ಧ್ ಕೃಷ್ಣ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು. ಪ್ರಸಿದ್ಧ ಕೃಷ್ಣ ಇಂಗ್ಲೆಂಡ್ಗೆ ನೀಡಿದ ಆಘಾತಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಪಂದ್ಯದ ಬಗ್ಗೆ ಪ್ರಸಿದ್ಧ ಕೃಷ್ಣ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ಪ್ರಸಿದ್ಧ್ ಕೃಷ್ಣ "ನನ್ನ ಮೊದಲ ದಿನದ ಕಾರ್ಯದ ಅನುಭವ ರೋಲರ್ ಕೋಸ್ಟರ್ ಪ್ರಯಾಣದಂತಿತ್ತು. ಸಂಪೂರ್ಣ ಮುಗಿಯುವವರೆಗೆ ಮುಗಿಯುವುದಿಲ್ಲ. ಎಲ್ಲವೂ ಉತ್ತಮವಾಗಿಯೇ ಕೊನೆಗೊಳ್ಳುತ್ತದೆ" ಎಂದು ಬರೆದುಕೊಂಡಿದ್ದಾರೆ.
ಪ್ರಸಿದ್ಧ ಕೃಷ್ಣ ತಮ್ಮ ಚೊಚ್ಚಲ ಪಂದ್ಯದಲ್ಲಿ ಭವನೇಶ್ವರ್ ಕುಮಾರ್ ಜೊತೆಗೆ ಹೊಸ ಚೆಂಡನ್ನು ಹಂಚಿಕೊಂಡರು. ಮೊದಲ ಓವರ್ ಉತ್ತಮವಾಗಿಯೇ ಇತ್ತು. ಎರಡನೇ ಓವರ್ನಲ್ಲಿ ಲೆನ್ತ್ ಲೆಕ್ಕಾಚಾರ ತಪ್ಪಿ ಸತತ ವೈಡ್ಗಳನ್ನು ಎಸೆದು ಒತ್ತಡವನ್ನು ತಂದುಕೊಂಡಿದ್ದರು ಕೃಷ್ಣ. ಆದರೆ ತಮ್ಮ ಮೂರನೇ ಓವರ್ನಲ್ಲಿ ಬೈರ್ಸ್ಟೋವ್ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಆಘಾತವನ್ನು ನೀಡಿದ್ದರು. ಮೊದಲ ಮೂರು ಓವರ್ಗಳಲ್ಲಿ 35 ರನ್ ನೀಡಿ ಕಹಿ ಅನುಭವ ಪಡೆದುಕೊಂಡರು.
ಆದರೆ ಪ್ರಸಿದ್ಧ ಕೃಷ್ಣ ತಮ್ಮ ಎರಡನೇ ಸ್ಪೆಲ್ನಲ್ಲಿ ಎದುರಾಳಿ ಇಂಗ್ಲೆಂಡ್ ವಿರುದ್ಧ ತಿರುಗು ಬೀಳುವಲ್ಲಿ ಯಶಸ್ವಿಯಾದರು. ಎರಡನೇ ಸ್ಪೆಲ್ ಬೌಲಿಂಗ್ ದಾಳಿಗೆ ಇಳಿದ ಪ್ರಸಿದ್ಧ್ ಜೇಸನ್ ರಾಯ್ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಟಾಮ್ ಕರ್ರನ್ ವಿಕೆಟ್ ಪಡೆಯುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು. ಇದು ಭಾರತೀಯ ಬೌಲರ್ ಓರ್ವ ಏಕದಿನ ಪದಾರ್ಪಣಾ ಪಂದ್ಯದಲ್ಲಿ ಮಾಡಿದ ಅತ್ಯುತ್ತಮ ಬೌಲಿಂಗ್ ದಾಳಿ ಎನಿಸಿದೆ.