
ವೆಸ್ಟ್ಇಂಡೀಸ್ ವಿರುದ್ಧದ ಸೆಣೆಸಾಟಕ್ಕೆ ಟೀಮ್ ಇಂಡಿಯಾ ಸಿದ್ಧವಾಗಿದೆ. ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ವಿಶ್ವಕಪ್ ದೃಷ್ಟಿಕೋನದಿಂದ ಟೀಮ್ ಇಂಡಿಯಾ ಎಡವಿರುವ ಕಡೆಗೆ ಗಮನ ನೀಡುವ ಕುರಿತಾಗಿ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಉಳಿಸಿಕೊಳ್ಳುವತ್ತ ಗಮನ ನೀಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಟಿ20 ಯಲ್ಲಿ ಚೇಸಿಂಗ್ ಸಂದರ್ಭದಲ್ಲೇ ಹೆಚ್ಚಿನ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಮೊದಲು ಬ್ಯಾಟ್ ಮಾಡಿ ಅದನ್ನು ಉಳಿಸಿಕೊಳ್ಳುವಲ್ಲಿ ಎಡವುತ್ತಿದೆ. ಹಿಂದಿನ ಸೌತ್ ಆಫ್ರಿಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯ ಮತ್ತು ಬಾಂಗ್ಲಾದೇಶದ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯ ಎರಡನ್ನೂ ಇದೇ ರೀತಿ ಟೀಮ್ ಇಂಡಿಯಾ ಸೋತಿತ್ತು.
ಐಸಿಸಿ ಟಿ20 ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ 5ನೇ ಸ್ಥಾನದಲ್ಲಿದೆ. ಆದರೆ ನಾವು ಅದರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿಲ್ಲ. ಟಿ20 ಪಂದ್ಯಗಳು ಪ್ರಯೋಗಮಾಡಲು ಹೇಳಿ ಮಾಡಿಸಿದಂತಿರುವ ಫಾರ್ಮ್ಯಾಟ್. ಇಲ್ಲಿ ಸಂಪೂರ್ಣ ಬಲದೊಂದಿಗೆ ಭಾರತ ಯಾವತ್ತೂ ಕಣಕ್ಕಿಳಿದಿಲ್ಲ. ಹೊಸಬರಿಗೆ ಅವಕಾಶವನ್ನು ನೀಡುವತ್ತ ಗಮನವನ್ನು ನೀಡಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅವಕಾಶಗಳನ್ನು ನೀಡುತ್ತಿದ್ದರು ನಿರೀಕ್ಷಿತ ಆಟ ಪ್ರದರ್ಶಿಸದ ರಿಷಬ್ ಪಂತ್ ವಿಚಾರವಾಗಿಯೂ ಕೊಹ್ಲಿ ಈ ಸಂದರ್ಭದಲ್ಲಿ ಮಾತನಾಡಿದರು. ರಿಷಬ್ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ನಂಬಿಕೆಯಿದೆ. ಆತ ಓರ್ವ ಮ್ಯಾಚ್ ವಿನ್ನರ್. ಆತನಿಂದ ಉತ್ತಮ ಪ್ರದರ್ಶನ ಬರಬೇಕು ಅಂದರೆ ಆತನ ಜೊತೆಗೆ ನಾವೆಲ್ಲಾ ಇದ್ದೀವಿ ಎಂಬ ಭಾವನೆ ಬರಬೇಕು. ಇದಕ್ಕೆ ತಂಡದ ಎಲ್ಲರ ಸಹಕಾರ ಮುಖ್ಯ ಎಂದು ಕೊಹ್ಲಿ ಹೇಳಿದ್ದಾರೆ.