
ರೋಹಿತ್ ಮತ್ತು ವಿರಾಟ್ ಮಧ್ಯೆ ಮನಸ್ತಾಪವಿದೆ ಎಂದ ನೆಟ್ಟಿಗ!
ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದೆ. ಇದಕ್ಕೆ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ರೋಹಿತ್ ಶರ್ಮಾ ನಿಜವಾಗಲೂ ಗಾಯದ ಸಮಸ್ಯೆಗೆ ಒಳಗಾಗಿದ್ದಾರಾ ಅಥವಾ ಸುಮ್ಮನೆ ಗಾಯದ ನೆಪ ಹೇಳಿ ಟೆಸ್ಟ್ ಸರಣಿಯಿಂದ ಹೊರಗುಳಿಯುತ್ತಿದ್ದಾರಾ ಎಂಬ ಅನುಮಾನವನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿದ್ದು ರೋಹಿತ್ ಮತ್ತು ವಿರಾಟ್ ನಡುವೆ ಮನಸ್ತಾಪವಿದೆ ಎಂದೂ ಕೂಡ ಈ ನೆಟ್ಟಿಗ ಉಲ್ಲೇಖಿಸಿದ್ದಾನೆ. ಈಗ ರೋಹಿತ್ ಶರ್ಮಾ ಗಾಯದ ನೆಪ ಹೇಳಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಮುಂದೆ ವಿರಾಟ್ ಕೊಹ್ಲಿ ಇದೇ ರೀತಿ ಗಾಯದ ನೆಪ ಹೇಳಿ ಏಕದಿನ ಸರಣಿಯಿಂದ ಹೊರ ಬೀಳಲಿದ್ದಾರೆ ಎನಿಸುತ್ತದೆ ಎಂದು ಬರೆದುಕೊಂಡಿದ್ದಾನೆ.

ಇದೊಂದು ಮೋಸದ ತಂತ್ರ ಎಂದ ನೆಟ್ಟಿಗ!
ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಕುರಿತಾಗಿ ಬಿಸಿಸಿಐ ಮಾಡಿರುವ ಟ್ವೀಟ್ಗೆ ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದು ಇದೊಂದು ಮೋಸದ ತಂತ್ರ ಎಂದಿದ್ದಾನೆ. ಭಾರತ ತಂಡದ ಸೀಮಿತ ಓವರ್ಗಳ ನಾಯಕನನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಂತಹ ಕಠಿಣ ಟೆಸ್ಟ್ ಸರಣಿಯಿಂದ ಗಾಯದ ನೆಪ ಹೇಳಿ ಹೊರ ಹಾಕುವುದರ ಮೂಲಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿಯಿಂದ ಕಸಿದುಕೊಳ್ಳಲು ನಡೆಸುತ್ತಿರುವ ಮೋಸದ ತಂತ್ರ ಇದಾಗಿದೆ ಎಂದು ಬರೆದುಕೊಂಡಿದ್ದಾನೆ. ಹಾಗೂ ಎಂದಿನಂತೆ ವಿರಾಟ್ ಕೊಹ್ಲಿ ಈ ಬಾರಿಯೂ ಕೂಡ ತನ್ನ ಬ್ಯಾಟಿಂಗ್ ಮೂಲಕ ಪ್ರತ್ಯುತ್ತರವನ್ನು ನೀಡಲಿದ್ದಾರೆ ಎಂದು ಕೂಡ ಉಲ್ಲೇಖಿಸಿದ್ದಾನೆ.

ರೋಹಿತ್ ಬದಲು ಇತರೆ ಆಟಗಾರರಿಗೆ ಟೆಸ್ಟ್ ತಂಡದ ಉಪನಾಯಕ ಸ್ಥಾನ ನೀಡಿ ಎಂದ ನೆಟ್ಟಿಗ
ರೋಹಿತ್ ಶರ್ಮಾ ವಯಸ್ಸು ಮತ್ತು ಫಿಟ್ನೆಸ್ ಗಮನಿಸಿದರೆ ಆತ ಟೆಸ್ಟ್ ಕ್ರಿಕೆಟ್ ಉಪನಾಯಕ ಸ್ಥಾನಕ್ಕೆ ಸರಿಯಾದ ಆಯ್ಕೆಯಲ್ಲ ಎನಿಸುತ್ತದೆ. ಹೀಗಾಗಿ ರೋಹಿತ್ ಶರ್ಮಾ ಬದಲು ಟೆಸ್ಟ್ ತಂಡದ ಉಪನಾಯಕ ಸ್ಥಾನಕ್ಕೆ ಅರ್ಹನಾದ ಆಟಗಾರನನ್ನು ಆಯ್ಕೆ ಮಾಡಲು ಇದು ಸರಿಯಾದ ಸಮಯ ಎಂದಿರುವ ನೆಟ್ಟಿಗ, ಹೇಗಿದ್ದರೂ ವಿರಾಟ್ ಕೊಹ್ಲಿ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ನಾಯಕನಾಗಿರಲಿದ್ದು, ಯಾರಾದರೂ ಯುವ ಕ್ರಿಕೆಟಿಗನನ್ನು ಉಪನಾಯಕನನ್ನಾಗಿ ಆರಿಸಿ ಎಂದಿದ್ದಾನೆ.


Click it and Unblock the Notifications
