
ಕೊಹ್ಲಿ ವಿಚಾರವಾಗಿ ಬಿಸಿಸಿಐ ಇತ್ತೀಚಿನ ದಿನಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಭಿಮಾನಿಗಳಲ್ಲಿ ಮತ್ತು ನೆಟ್ಟಿಗರಲ್ಲಿ ಕೋಪ ಉಂಟಾಗಲು ಉತ್ತೇಜನವನ್ನು ನೀಡುತ್ತಿದೆ. ಹೌದು, ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಎಲ್ಲವೂ ಸರಿಯಿಲ್ಲ ಎಂದು ಪದೇ ಪದೇ ಎನಿಸುವಂತಹ ಘಟನೆಗಳು ನಡೆಯುತ್ತಿವೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂಬ ಘೋಷಣೆಯನ್ನು ಮಾಡಿತು. ಹೀಗೆ ಏಕಾಏಕಿ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಯಾಕೆ ತೆಗೆದುಹಾಕಲಾಯಿತು ಎಂಬ ಕಾರಣವನ್ನೂ ತಿಳಿಸದ ಬಿಸಿಸಿಐ ಭಾರೀ ಟೀಕೆಗಳಿಗೆ ಒಳಗಾಯಿತು. ಹೀಗೆ ಟೀಕೆಗಳನ್ನು ಎದುರಿಸಿದ ನಂತರ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಿಗೆ ಓರ್ವನೇ ನಾಯಕನಿರಬೇಕು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡೆವು ಎಂದು ಬಿಸಿಸಿಐ ಸ್ಪಷ್ಟನೆ ನೀಡಿತು.
ಹಾಗೂ ಇದಾದ ನಂತರ ಮಾತನಾಡಿದ್ದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದು ಮಾಹಿತಿಯನ್ನು ನೀಡಿದಾಗ ಬಿಸಿಸಿಐ ಮೊದಲು ಪ್ರತಿರೋಧವನ್ನು ವ್ಯಕ್ತಪಡಿಸಿತ್ತು ಆದರೆ ವಿರಾಟ್ ಕೊಹ್ಲಿ ಇದಕ್ಕೆ ಕಿವಿಗೊಡದೆ ತನ್ನ ನಿರ್ಧಾರದಲ್ಲಿಯೇ ಮುಂದುವರೆದರು ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ನಡೆದ ಮಾಧ್ಯಮಗೋಷ್ಠಿಯಲ್ಲಿ ತಾನು ಟಿ ಟ್ವೆಂಟಿ ನಾಯಕತ್ವಕ್ಕೆ ರಾಜಿನಾಮೆ ಘೋಷಿಸಲು ಮುಂದಾದಾಗ ಬಿಸಿಸಿಐ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದರು.
ಕೊಹ್ಲಿ ಈ ರೀತಿಯ ಹೇಳಿಕೆ ನೀಡಿದ ನಂತರ ಸೌರವ್ ಗಂಗೂಲಿ ಸುಳ್ಳು ಹೇಳಿಕೆಗಳನ್ನು ನೀಡಿದ್ದರು ಎಂದು ಕಿಡಿಕಾರಿದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸೌರವ್ ಗಂಗೂಲಿ ವಿರುದ್ಧ ಟ್ರೆಂಡ್ ಮಾಡಿದರು. ಹೀಗೆ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಸಿಸಿಐ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು ಕಡೆಗಣಿಸುವದರ ಮೂಲಕ ಬೇಡದ ಚರ್ಚೆಗೆ ಆಹಾರವಾಗಿದೆ. ಹೌದು, ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲು ಇಂದು ಭಾರತ ತಂಡದ ಆಟಗಾರರು ಬಿಸಿಸಿಐ ಆಯೋಜಿಸಿದ್ದ ಚಾರ್ಟರ್ಡ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹಾರಿದರು. ಹೀಗೆ ಟೀಮ್ ಇಂಡಿಯಾ ಆಟಗಾರರು ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸುತ್ತಿರುವ ವಿಷಯವನ್ನು ಹಂಚಿಕೊಂಡ ಬಿಸಿಸಿಐ ತಂಡದ ಕೆಲ ಆಟಗಾರರ ಚಿತ್ರಗಳನ್ನು ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿತ್ತು. ಆದರೆ ಇದರಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿರಲಿಲ್ಲ.
ಹೀಗೆ ವಿರಾಟ್ ಕೊಹ್ಲಿಯವರ ಫೋಟೋವನ್ನು ಹಂಚಿಕೊಳ್ಳದೇ ಇತರ ಆಟಗಾರರ ಫೋಟೋಗಳನ್ನು ಹಂಚಿಕೊಂಡ ಬಿಸಿಸಿಐ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ಮತ್ತು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕಿಡಿಕಾರಿದರು. ಬೇರೆ ಕ್ರಿಕೆಟ್ ಬೋರ್ಡ್ಗಳು ತಮ್ಮ ತಂಡದ ನಾಯಕನ ಚಿತ್ರಗಳನ್ನು ಮೊದಲು ಹಂಚಿಕೊಳ್ಳುತ್ತವೆ ಆದರೆ ಬಿಸಿಸಿಐ ವಿರಾಟ್ ಕೊಹ್ಲಿ ಅವರ ಫೋಟೋವನ್ನು ಬೇಕಂತಲೇ ಹಾಕದೇ ಕಡೆಗಣಿಸಿದೆ ಎಂದು ಕಾಮೆಂಟ್ ಮಾಡುವ ಮೂಲಕ ಕಿಡಿಕಾರಿದರು.
ಹೀಗೆ ಸಾಕಷ್ಟು ಕಾಮೆಂಟ್ ಬಂದ ನಂತರ ಎಚ್ಚೆತ್ತ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರು ಜೋಹಾನ್ಸ್ ಬರ್ಗ್ ತಲುಪಿದ ನಂತರ ಮತ್ತೊಂದು ಟ್ವೀಟ್ ಮಾಡುವ ಮೂಲಕ ತಂಡದ ಆಟಗಾರರ ಚಿತ್ರಗಳನ್ನು ಹಂಚಿಕೊಂಡಿತು. ಹೀಗೆ ಮತ್ತೊಂದು ಟ್ವೀಟ್ ಮಾಡಿದ ಬಿಸಿಸಿಐ ಈ ಬಾರಿ ವಿರಾಟ್ ಕೊಹ್ಲಿ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತನ್ನ ಹಳೆಯ ಟ್ವೀಟ್ ಮೂಲಕ ಮಾಡಿದ ತಪ್ಪನ್ನು ತಿದ್ದಿಕೊಂಡಿದೆ.
ಇನ್ನು ದಕ್ಷಿಣ ಆಫ್ರಿಕಾ ತಲುಪಿರುವ ಭಾರತೀಯ ಆಟಗಾರರನ್ನು ಕ್ವಾರಂಟೈನ್ ನಿಯಮಕ್ಕೆ ಒಳಪಡಿಸಲಿದ್ದು ಕೊರೋನಾ ಟೆಸ್ಟ್ ಫಲಿತಾಂಶದ ವರದಿ ಬಂದ ನಂತರವಷ್ಟೇ ಟೀಮ್ ಇಂಡಿಯಾ ಆಟಗಾರರನ್ನು ಕ್ವಾರಂಟೈನ್ ಆಗಿದ್ದ ಹೊಟೇಲ್ನಿಂದ ಬಿಡುಗಡೆ ಮಾಡಲಿದ್ದೇವೆ ಹಾಗೂ ಈ ಪ್ರಕ್ರಿಯೆ 1 ದಿನಕ್ಕಿಂತ ಅಧಿಕವಾಗಿ ಇರುವುದಿಲ್ಲ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.