
ಚೆನ್ನೈ: ಚೈನಾಮನ್ ಕುಲದೀಪ್ ಯಾದವ್ ಮತ್ತೆ ಟೀಮ್ ಇಂಡಿಯಾ ನಿರ್ವಹಣಾ ಸಮಿತಿಯಿಂದ ಕಡೆಗಣಿಸಲ್ಪಟ್ಟಿದ್ದಾರೆ ಎನ್ನಲಾಗಿದೆ. ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ನಲ್ಲಿ ಕುಲದೀಪ್ಗೆ ಅವಕಾಶ ಸಿಗಲಿದೆಯೇ ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಯೇ ಸುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿರುವ ದ್ವಿತೀಯ ಟೆಸ್ಟ್ನಲ್ಲಿ ಬೌಲರ್ ಶಹಬಾಝ್ ನದೀಮ್ ಬದಲಿಗೆ ಅಕ್ಸರ್ ಪಟೇಲ್ ಅವರನ್ನು ಕರೆತರುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ. ಹೀಗಾಗಿ ಕುಲದೀಪ್ಗೆ ಮುಂದಿನ ಪಂದ್ಯದಲ್ಲೂ ಅವಕಾಶದ ಸಾಧ್ಯತೆ ಕಡಿಮೆಯಿದೆ.
ಸ್ಪೋರ್ಟ್ಸ್ ಟುಡೇ ವರದಿಯ ಪ್ರಕಾರ, ಭಾರತದ ಅನುಭವಿ ಬೌಲರ್ ಅಕ್ಸರ್ ಪಟೇಲ್ ಚೇಪಕ್ ಸ್ಟೇಡಿಯಂನಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ಒಂದು ವೇಳೆ ಅಕ್ಸರ್ ಸಂಪೂರ್ಣ ಫಿಟ್ ಆಗಿದ್ದರೆ ದ್ವಿತೀಯ ಟೆಸ್ಟ್ನಲ್ಲಿ ನದೀಮ್ ಬದಲು ಮೈದಾನಕ್ಕಿಳಿಯಲಿದ್ದಾರೆ.
ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ನಲ್ಲಿ ಇಂಗ್ಲೆಂಡ್ 227 ರನ್ನಿಂದ ಗೆದ್ದಿತ್ತು. ದ್ವಿತೀಯ ಟೆಸ್ಟ್ ಫೆಬ್ರವರಿ 13ರಿಂದ ಆರಂಭಗೊಳ್ಳಲಿದೆ. ಬೌಲಿಂಗ್ ಆಲ್ ರೌಂಡರ್ ಅಕ್ಸರ್ ಪಟೇಲ್ ಭಾರತ ಪರ 38 ಏಕದಿನ ಪಂದ್ಯಗಳಲ್ಲಿ 181 ರನ್, 45 ವಿಕೆಟ್, 11 ಟಿ20ಐ ಪಂದ್ಯಗಳಲ್ಲಿ 68 ರನ್, 9 ವಿಕೆಟ್ ಪಡೆದಿದ್ದಾರೆ. ಕುಲದೀಪ್ 6 ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್, 61 ಏಕದಿನ ಪಂದ್ಯಗಳಲ್ಲಿ 105 ವಿಕೆಟ್ಗಳು, 20 ಟಿ20ಐ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿದ್ದಾರೆ.