ಟಿ20 ವಿಶ್ವಕಪ್ಗೂ ಮುನ್ನ ಪಾಕಿಸ್ತಾನ ನಡೆದುಕೊಂಡ ರೀತಿಯ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ( ಐಸಿಸಿ) ಅಧ್ಯಕ್ಷ ಜಯ್ ಶಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಯಾವುದೇ ದೇಶ ಹಾಗೂ ತಂಡ ಸಂಸ್ಥೆಗಿಂತ ದೊಡ್ಡದಲ್ಲ. ಐಸಿಸಿ ಎಲ್ಲಾ ಸದಸ್ಯ ತಂಡಗಳ ಸಾಮೂಹಿಕ ಪ್ರಯತ್ನಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಜಯ್ ಶಾ, ವಿಶ್ವಕಪ್ ಆರಂಭಕ್ಕೂ ಮುನ್ನ ಕೆಲವು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತವೇಯೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಯಾವುದೇ ತಂಡ, ಸಂಸ್ಥೆಗಿಂತ ದೊಡ್ಡದಲ್ಲ ಎಂದು ಅಧ್ಯಕ್ಷನಾಗಿ ಹೇಳಬಲ್ಲೆ ಎಂದು ಜಯ್ ಶಾ ತಿಳಿಸಿದ್ದಾರೆ. ಐಸಿಸಿ ಎಲ್ಲ ತಂಡಗಳೊಂದಿಗೆ ಸಂಘಟಿತವಾಗಿ ಟೂರ್ನಿಯನ್ನು ಆಯೋಜಿಸುತ್ತದೆ. ಈ ವಿಶ್ವಕಪ್ ವೀಕ್ಷಕರ ವಿಷಯದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ ಎಂದು ಜಯ್ ಶಾ ಹೇಳಿದ್ದಾರೆ.

ಸೂರ್ಯಕುಮಾರ್ ಮತ್ತು ಗಂಭೀರ್ ಅವರಿಗೆ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಂತೆ ಜಯ್ ಶಾ ಸಲಹೆ ನೀಡಿದರು. ತಂಡದ ನಾಯಕ ಹಾಗೂ ಕೋಚ್ಗೆ ನನ್ನದೊಂದು ಸಲಹೆ. ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಿ ಮತ್ತು ಪ್ರಶಸ್ತಿಗಳನ್ನು ಗೆಲ್ಲುತ್ತಲೇ ಇರಿ. ನೀವೆಲ್ಲರೂ 2030, 2031 ಮತ್ತು 2036 ಕ್ಕೆ ಸಹ ಸಿದ್ಧರಾಗಬೇಕು" ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶ ಟಿ20 ವಿಶ್ವಕಪ್ ಬಹಿಷ್ಕರಿಸಿದ್ದು ಏಕೆ?
ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಖರೀದಿಸಿತ್ತು. ಬಾಂಗ್ಲಾದೇಶದಲ್ಲಿ ಹಿಂಧೂಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಬಾಂಗ್ಲಾ ಆಟಗಾರರನ್ನು ಐಪಿಎಲ್ನಿಂದ ಕೈ ಬಿಡುವಂತೆ ಕೂಗು ಕೇಳಿ ಬಂದಿತು. ಬಿಸಿಸಿಐ ಕೆಕೆಆರ್ ತಂಡಕ್ಕೆ ಮುಸ್ತಾಫಿಜುರ್ ಅವರನ್ನು ಕೈ ಬಿಡುವಂತೆ ಸೂಚಿಸಿತು. ಇದಾದ ಬೆನ್ನಲೆ ಬಾಂಗ್ಲಾದೇಶ ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಟೂರ್ನಿಯಿಂದ ಹೊರ ನಡೆಯುವುದಾಗಿ ತಿಳಿಸಿತ್ತು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ಗುಂಪನ್ನು ಬದಲಿಸುವಂತೆ ಇಲ್ಲವೇ ಮೈದಾನ ಬದಲಿಸುವಂತೆ ಐಸಿಸಿಗೆ ಮನವಿಯನ್ನು ಮಾಡಿತ್ತು. ಬಿಸಿಬಿ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಆಗ ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ಹೊರಗುಳಿಯುವುದಾಗಿ ಸ್ಪಷ್ಟಪಡಿಸಿತು. ಬಾಂಗ್ಲಾದೇಶದ ಪರ ಈ ಸಮಯದಲ್ಲಿ ಪಾಕಿಸ್ತಾನ ಧ್ವನಿ ಗೂಡಿಸಿತ್ತು.
ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ಹೊರ ನಡೆಯುತ್ತಿದ್ದಂತೆ ಪಾಕಿಸ್ತಾನ ಸಹ ನಾಟಕ ಆರಂಭಿಸಿತು. ಆರಂಭದಲ್ಲಿ ಟಿ20 ವಿಶ್ವಕಪ್ನಿಂದ ಹೊರಗುಳಿಯುವುದಾಗಿ ತಿಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತದನಂತರ ಭಾರತದ ವಿರುದ್ಧ ಲೀಗ್ ಹಂತದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ತಿಳಿಸಿತ್ತು. ಇದಾದ ಬಳಿಕ ಐಸಿಸಿ, ಬಿಸಿಬಿ, ಪಿಸಿಬಿ ಸರಣಿ ಸಭೆಗಳನ್ನು ನಡೆಸಿತು. ಈ ವೇಳೆ ಪಿಸಿಬಿ ಹಲವು ಷರತ್ತುಗಳನ್ನು ವಿಧಿಸಿತು. ಆದರೆ ಇದರಲ್ಲಿ ಕೆಲವು ಷರತ್ತುಗಳನ್ನು ಐಸಿಸಿ ತಿರಸ್ಕರಿತಿಸಿತು. ಬಳಿಕ ಪಾಕಿಸ್ತಾನ ಪ್ರಧಾನಿ ಕ್ಯಾಬಿನೇಟ್ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಆಡುವುದಾಗಿ ಸ್ಪಷ್ಟ ಪಡಿಸಿದ್ದರು.