ಭಾರತ ಕ್ರಿಕೆಟ್ ತಂಡದ ಮಾಜಿ ಲೆಜೆಂಡ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ವಿಶ್ವದ ಅಗ್ರ ಮೂರು ಬ್ಯಾಟರ್ಗಳನ್ನು ಆಯ್ಕೆ ಮಾಡುವಾಗ, ಆಧುನಿಕ ಕ್ರಿಕೆಟ್ನ ಶ್ರೇಷ್ಠರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರ ಹೆಸರನ್ನೂ ಸೇರಿಸಿಕೊಳ್ಳಲಿಲ್ಲ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಅಗ್ರ ಆಯ್ಕೆ ಎಂದರೆ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.

ಅಲ್ಲದೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಕ್ವೆಸ್ ಕಾಲಿಸ್ ಮತ್ತು ವೆಸ್ಟ್ ಇಂಡೀಸ್ ಶ್ರೇಷ್ಠ ಬ್ರಿಯಾನ್ ಲಾರಾ ಅವರನ್ನು ಇತರ ಎರಡು ಆಯ್ಕೆಗಳಾಗಿ ಹರ್ಭಜನ್ ಸಿಂಗ್ ಹೆಸರಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಿಶ್ವದ ಟಾಪ್ ಮೂರು ಬ್ಯಾಟರ್ಗಳನ್ನು ಆಯ್ಕೆ ಮಾಡಲು ಹರ್ಭಜನ್ ಸಿಂಗ್ ಅವರನ್ನು ಕೇಳಲಾಯಿತು. ಈ ವೇಳೆ ಅವರು ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಯಾವುದೇ ಆಟಗಾರರಿಗಿಂತ ಮೂರು ಲೆಜೆಂಡರಿ ಆಟಗಾರರನ್ನು ಆಯ್ಕೆ ಮಾಡಿದರು.
ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಕೂಡ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಹೆಸರನ್ನು ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಸರ್ ವಿವಿಯನ್ ರಿಚರ್ಡ್ಸ್, ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರನ್ನು ಅಗ್ರ ಮೂವರು ಬ್ಯಾಟರ್ಗಳಾಗಿ ಆಯ್ಕೆ ಮಾಡಿದರು.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಅವರು ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರೊಂದಿಗೆ ಮೂರನೇ ಆಯ್ಕೆಯಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಜೆಂಡ್ ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿದರು.
"ನಿಸ್ಸಂಶಯವಾಗಿ, ಸಚಿನ್ ತೆಂಡೂಲ್ಕರ್ ಅವರು ಹೊಂದಿದ್ದ ದಾಖಲೆ, ಆಸ್ಟ್ರೇಲಿಯಾದ ಕ್ರಿಕೆಟ್ ಮೇಲೆ ಬೀರಿದ ಪ್ರಭಾವಕ್ಕಾಗಿ ರಿಕಿ ಪಾಂಟಿಂಗ್, ಕೇವಲ ಸಂಪೂರ್ಣ ಮನರಂಜನಾ ಮೌಲ್ಯಕ್ಕಾಗಿ ಬ್ರಿಯಾನ್ ಲಾರಾ," ಎಂದು ಆರೋನ್ ಫಿಂಚ್ ತಿಳಿಸಿದರು.
ಆದರೆ, ಭಾರತದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಅವರು ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಜೊತೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ತನ್ನ ಟಾಪ್ 3ರಲ್ಲಿ ಸೇರಿಸಿಕೊಂಡರು.
ಇದಕ್ಕೂ ಮುನ್ನ ಹರ್ಭಜನ್ ಸಿಂಗ್ ಅವರು ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಹೊಸ ಇನ್ನಿಂಗ್ಸ್ಗೆ ಅಭಿನಂದನೆ ಸಲ್ಲಿಸಿದರು.
"ನಿಮ್ಮ ಅನುಭವ, ಶಕ್ತಿ, ಉತ್ಸಾಹ, ಆಕ್ರಮಣಶೀಲತೆ ಮತ್ತು ಪ್ರತಿಭೆ ತಂಡವನ್ನು ಶ್ರೇಷ್ಠತೆಯ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ನನಗೆ ಖಾತ್ರಿಯಿದೆ. ನಿಮಗೆ ನನ್ನ ಶುಭಾಶಯಗಳು. ಶುಭವಾಗಲಿ ಗೆಳೆಯ," ಎಂದು ಹರ್ಭಜನ್ ಸಿಂಗ್ ಬರೆದುಕೊಂಡಿದ್ದಾರೆ.
ಇನ್ನು ಮಾಜಿ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿ, "ಅಭಿನಂದನೆಗಳು ಗೌತಮ್ ಗಂಭೀರ್. ನಿಮಗೆ ಶುಭ ಹಾರೈಸುತ್ತೇನೆ!," ಎಂದು ತಿಳಿಸಿದ್ದಾರೆ.
ತಮ್ಮ 2014ರ ಐಪಿಎಲ್ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಆರಂಭಿಕ ಜೊತೆಗಾರನಾಗಿದ್ದ ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಕೂಡ ಅಭಿನಂದನಾ ಸಂದೇಶ ಹಂಚಿಕೊಂಡಿದ್ದಾರೆ.
"ಅಭಿನಂದನೆಗಳು ಸಹೋದರ!! ನಿಮ್ಮ ಸಮರ್ಥ ಮಾರ್ಗದರ್ಶನದಲ್ಲಿ ಭಾರತ ತಂಡವು ಪ್ರವರ್ಧಮಾನಕ್ಕೆ ಬರುವುದನ್ನು ನೋಡಲು ಕಾಯಲು ಸಾಧ್ಯವಿಲ್ಲ. ಹೊಸ ಪಾತ್ರಕ್ಕೆ ಶುಭ ಹಾರೈಸುತ್ತೇನೆ," ಎಂದು ರಾಬಿನ್ ಉತ್ತಪ್ಪ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟಿಗ ಚೇತೇಶ್ವರ ಪೂಜಾರ, "ಅಭಿನಂದನೆಗಳು ಮತ್ತು ಶುಭಾಶಯಗಳು ಗೌತಿ ಭಾಯ್!" ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.