
ಸೋಮವಾರ, ಮಾರ್ಚ್ 13ರಂದು ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಂದು ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ತಂಡ ರೋಚಕ ಗೆಲುವು ಸಾಧಿಸಿತು. ಈ ಬಳಿಕ ಶತಕವೀರ ಕೇನ್ ವಿಲಿಯಮ್ಸನ್ ಕೋಟ್ಯಂತರ ಭಾರತೀಯ ಅಭಿಮಾನಿಗಳ ಪಾಲಿಗೆ "ಹೀರೋ' ಎನಿಸಿದರು.
ನ್ಯೂಜಿಲೆಂಡ್ ತಂಡದ ಈ ಗೆಲುವು ಶ್ರೀಲಂಕಾ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಹೊರಗುಳಿಯುವಂತೆ ಮಾಡಿತು ಮತ್ತು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಆಡುವ ಅರ್ಹತೆ ಪಡೆಯಲು ಸಹಾಯ ಮಾಡಿತು.
ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾಗಳು ಕೇನ್ ವಿಲಿಯಮ್ಸನ್ ಅವರ ಶತಕದ ಇನ್ನಿಂಗ್ಸ್ ಮತ್ತು ಪಂದ್ಯ ವಿಜೇತ ಆಟವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ, ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಕ್ರೈಸ್ಟ್ಚರ್ಚ್ನಲ್ಲಿ ಸೋಮವಾರ ನಡೆದ ಮೊದಲ ಟೆಸ್ಟ್ ಪಂದ್ಯದ ಮಳೆ ಬಾಧಿತ ಅಂತಿಮ ದಿನದಂದು ಅಂತಿಮ ಎಸೆತದಲ್ಲಿ 285 ರನ್ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಶ್ರೀಲಂಕಾ ತಂಡವನ್ನು 2 ವಿಕೆಟ್ಗಳಿಂದ ಸೋಲಿಸಿ ನ್ಯೂಜಿಲೆಂಡ್ ದಿಗ್ವಿಜಯ ಸಾಧಿಸಿತು.

ಶತಕವೀರ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ರೋಚಕ ವಿಜಯದತ್ತ ಕೊಂಡೊಯ್ಯಲು ಕೊನೆಯವರೆಗೂ ಹೋರಾಡಿದರು ಮತ್ತು ಈ ಇನ್ನಿಂಗ್ಸ್ ಅವರಿಗೆ ಅವಿಸ್ಮರಣೀಯವಾಗಿರುವಂತೆ ಮಾಡಿದರು.
ವೆಲ್ಲಿಂಗ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಒಂದು ರನ್ ಗೆಲುವಿನ ಬೆನ್ನಲ್ಲೇ ಬಂದ ಈ ಗೆಲುವು, ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಆತಿಥೇಯರಿಗೆ 1-0 ಮುನ್ನಡೆ ನೀಡಿತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಲ್ಲಿ ಸ್ಪರ್ಧಿಸುವ ಶ್ರೀಲಂಕಾ ತಂಡದ ಆಸೆಗೆ ತಣ್ಣೀರೆರಚಿತು.
ಹ್ಯಾಗ್ಲಿ ಓವಲ್ನಲ್ಲಿ ಮೊದಲ 4 ಗಂಟೆಗಳ ಆಟವು ಮಳೆಯಿಂದ ನಿಂತಿತು. ನಂತರ ಕೇನ್ ವಿಲಿಯಮ್ಸನ್ ಅವರು ತಮ್ಮ 27ನೇ ಟೆಸ್ಟ್ ಶತಕವನ್ನು ಬಾರಿಸಿ ಅಂತಿಮವಾಗಿ ಅಜೇಯ 121 ರನ್ ಗಳಿಸಿದರು.
ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ನೀಲ್ ವ್ಯಾಗ್ನರ್ ಬೈ ರನ್ ಕದಿಯುತ್ತಿದ್ದಾಗ, ಶ್ರೀಲಂಕಾ ಫೀಲ್ಡರ್ ಎಸೆದ ಬಾಲ್ ನೇರ ಸ್ಟಂಪ್ಗೆ ಬಡಿಯಿತು. ಆದರೆ, ಅದಕ್ಕೂ ಮೊದಲೇ ಕೇನ್ ವಿಲಿಯಮ್ಸನ್ ಡೈವಿಂಗ್ ಮಾಡುವ ಮೂಲಕ ತನ್ನ ಬ್ಯಾಟ್ ಅನ್ನು ಕ್ರೀಸ್ ಒಳಗಡೆ ಇರಿಸಿದ್ದರು ಮತ್ತು ಅಂತಿಮ ಎಸೆತದಲ್ಲಿ ಗೆಲುವನ್ನು ಖಚಿತಪಡಿಸಿದರು.

ಭಾರತವು ಜೂನ್ 7ರಿಂದ 11ರವರೆಗೆ ಲಂಡನ್ನ ದಿ ಓವಲ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇಂದೋರ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ಗೆ ಅರ್ಹತೆ ಗಳಿಸಿತ್ತು.
ಆಸ್ಟ್ರೇಲಿಯಾ ಫೈನಲ್ಗೆ ಮುನ್ನಡೆದ ನಂತರ, ಮಾರ್ಚ್ನ ಎರಡನೇ ವಾರದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಭಾರತ ಮತ್ತು ಶ್ರೀಲಂಕಾ ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದವು. ಆದರೆ ಕ್ರೈಸ್ಟ್ಚರ್ಚ್ ಟೆಸ್ಟ್ನಲ್ಲಿ ಶ್ರೀಲಂಕಾದ ಹೋರಾಟವು ಅವರ ಆಸೆಯನ್ನು ಜೀವಂತವಾಗಿಡಲು ಸಾಕಾಗಲಿಲ್ಲ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಡ್ರಾನತ್ತ ಸಾಗಿದ್ದು, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನಲ್ಲಿ 480 ರನ್ಗಳಿಗೆ ಪ್ರತ್ಯುತ್ತರವಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 571 ರನ್ ಗಳಿಸಿ 99 ರನ್ಗಳ ಮುನ್ನಡೆ ಪಡೆದಿತ್ತು.
ಇದೀಗ ಅಂತಿಮ ಪಂದ್ಯದ ಅಂತಿಮ ದಿನದಂದು ಟೀ ವಿರಾಮದ ವೇಳೆಗೆ ಎರಡನೇ ಇನ್ನಿಂಗ್ಸ್ ಮುಂದುವರೆಸಿರುವ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 67 ರನ್ಗಳ ಮುನ್ನಡೆ ಪಡೆದಿದೆ.