
ಇದೇ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿಯೇ ನಡೆಯಲಿದೆ. ಈಗಾಗಲೇ ಹಲವು ತಂಡಗಳು ವಿಶ್ವಕಪ್ಗಾಗಿ ತಮ್ಮ ತಂಡದ ಸಂಯೋಜನೆಯನ್ನು ಸಿದ್ಧಪಡಿಸುತ್ತಿವೆ.
ಅಲ್ಲದೇ, ಆಯಾ ತಂಡಗಳ ಮಂಡಳಿಗಳು ಆಟಗಾರರನ್ನು ಗಾಯದಿಂದ ರಕ್ಷಣೆ ಮಾಡಲು ಮತ್ತು ಫಿಟ್ನೆಸ್ ಕಾಯ್ದುಕೊಳ್ಳಲು ಎಚ್ಚರಿಕೆಯನ್ನು ವಹಿಸಿದ್ದಾರೆ.
ಇದೆ ವೇಳೆ, ಐಸಿಸಿ ಪುರುಷರ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಅವಶ್ಯಕತೆ ಇದೆ ಎಂದು ಶ್ರೀಲಂಕಾ ತಂಡದ ಮಾಜಿ ವೇಗಿ ದಿಲ್ಹರಾ ಫೆರ್ನಾಂಡೋ ಅಭಿಪ್ರಾಯಪಟ್ಟಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ ದಿಲ್ಹರಾ ಫರ್ನಾಂಡೋ, ಜಸ್ಪ್ರೀತ್ ಬುಮ್ರಾ ಕಳೆದ ಐದು ವರ್ಷಗಳಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಆತ ಪಂದ್ಯವನ್ನು ಬದಲಿಸುವ ಬೌಲರ್ ಎಂದು ಕರೆದಿದ್ದಾರೆ.

"ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲರ್. ಕಳೆದ ಐದು ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡಿದರೆ, ಅದರಲ್ಲಿ ಜಸ್ಪ್ರೀತ್ ಬುಮ್ರಾ ಪಾತ್ರ ದೊಡ್ಡದಿದೆ. ಆತ ಭಾರತದ ವೇಗದ ದಾಳಿಯನ್ನು ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ಪಂದ್ಯದ ದಿಕ್ಕನ್ನು ಬದಲಿಸುವ ಆಟಗಾರನಾಗಿದ್ದಾರೆ," ಎಂದು ಶ್ರೀಲಂಕಾ ಮಾಜಿ ವೇಗಿ ದಿಲ್ಹರಾ ಫರ್ನಾಂಡೊ ಹೇಳಿದರು.
ಜಸ್ಪ್ರೀತ್ ಬುಮ್ರಾ ಅವರ ಗಾಯದ ಬಗ್ಗೆ ಮಾತನಾಡಿದ ದಿಲ್ಹರಾ ಫೆರ್ನಾಂಡೊ, "ಮುಂಬರುವ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಈ ವೇಗಿ ಪ್ರಮುಖ ಅಸ್ತ್ರವಾಗಲಿದ್ದಾರೆ. ತಂಡಕ್ಕೆ ನಿಜವಾಗಿಯೂ ಆತನ ಅವಶ್ಯಕತೆ ಇದೆ".
ಜಸ್ಪ್ರೀತ್ ಬುಮ್ರಾ ಕಳೆದ ಜುಲೈ 2022ರಿಂದ ಬೆನ್ನುನೋವಿನ ಗಾಯಕ್ಕೆ ಒಳಗಾಗಿ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಿಂದಲೂ ಹೊರಗುಳಿದಿದ್ದರು. ಅದೇ ರೀತಿ ಪ್ರಸಕ್ತ ವರ್ಷದ ಐಪಿಎಲ್ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳಿದ ದಿಲ್ಹರಾ ಫರ್ನಾಂಡೋ, "ಭಾರತೀಯ ಪರಿಸ್ಥಿತಿಗಳಲ್ಲಿ ಬುಮ್ರಾ ಎದುರಾಳಿ ತಂಡಕ್ಕೆ ದುಃಸ್ವಪ್ನವಾಗಿದ್ದಾರೆ. ಭಾರತ ತಂಡವು ವಿಶ್ವಕಪ್ ಗೆಲ್ಲುವ ಅಗ್ರ ತಂಡಗಳಲ್ಲಿ ಒಂದಾಗಿದೆ. ಭಾರತವು 2011ರ ನಂತರ ಮೊದಲ ಬಾರಿಗೆ ವಿಶ್ವಕಪ್ಗೆ ಆತಿಥ್ಯ ವಹಿಸಲು ಸಜ್ಜಾಗಿದ್ದು, 2011ರಲ್ಲಿ ಕೊನೆಯ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು," ಎಂದು ಹೇಳಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಮತ್ತು ಏಕದಿನ ವಿಶ್ವಕಪ್ ವೇಳೆಗೆ ಬುಮ್ರಾ ಫಿಟ್ ಆಗಿರಲು ಮತ್ತು ಬೌಲಿಂಗ್ ಮಾಡಲು ಬಯಸಿದ್ದಾರೆ ಎಂದು ದಿಲ್ಹರಾ ಫರ್ನಾಂಡೋ ತಿಳಿಸಿದರು.
ಏಕದಿನ ವಿಶ್ವಕಪ್ಗೂ ಮುನ್ನ ಐಪಿಎಲ್, ನಂತರ ಚಾಂಪಿಯನ್ಶಿಪ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಭಾರತದ ಆಟಗಾರರು ಫಿಟ್ ಆಗಿರಬೇಕಾಗಿದೆ. ಈಗಾಗಲೇ ಭಾರತ ತಂಡದ ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಗಾಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.