ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತದ ನೆಲಕ್ಕೆ ಕಾಲಿಟ್ಟಿದೆ. ಸೆಪ್ಟೆಂಬರ್ 27ರಂದು ಭಾರತಕ್ಕೆ ಆಗಮಿಸಿದ ಪಾಕಿಸ್ತಾನ ತಂಡಕ್ಕೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಆಟಗಾರರು, ಸಹಾಯಕ ಸಿಬ್ಬಂದಿಯೊಂದಿಗೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅತ್ಯುತ್ತಮ ಸ್ವಾಗತ ಸಿಕ್ಕಿತ್ತು. 2016ರಲ್ಲಿ ಟಿ20 ವಿಶ್ವಕಪ್ಗಾಗಿ ಪಾಕಿಸ್ತಾನ ಕೊನೆಯ ಬಾರಿ ಭಾರತಕ್ಕೆ ಭೇಟಿ ನೀಡಿತ್ತು.
ಭಾರತ ನೆಲದಲ್ಲಿ ಸಿಕ್ಕ ಗೌರವ ಕಂಡು ಪಾಕ್ ಆಟಗಾರರ ಅಚ್ಚರಿಗೊಳಗಾಗಿದ್ದರು. ಹೈದರಾಬಾದ್ನಲ್ಲಿ ಅವರಿಗೆ ಅದ್ಭುತ ಆತಿಥ್ಯ ಸತ್ಕಾರ ಸಿಕ್ಕಿತ್ತು. ಗೋಮಾಂಸ ನಿಷೇಧವಿರುವ ಕಾರಣ, ಮಟನ್ ಮತ್ತು ಚಿಕನ್ ಖಾದ್ಯಗಳನ್ನು ನೀಡಲಾಗುತ್ತಿದೆ. ಹೈದರಾಬಾದ್ ಬಿರಿಯಾನಿಗೆ ಪಾಕ್ ಆಟಗಾರರು ಮನಸೋತಿದ್ದಾರೆ.

ಶುಕ್ರವಾರ ಹೈದರಾಬಾದ್ನಲ್ಲಿ ಪಾಕಿಸ್ತಾನ ತನ್ನ ವಿಶ್ವಕಪ್ 2023ರ ಮೊದಲ ಪಂದ್ಯ ಆಡುತ್ತಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಭಾರತದ ಆತಿಥ್ಯವನ್ನು ಆಡಿ ಹೊಗಳಿದ್ದಾರೆ.
ಭಾರತಲ್ಲಿ ತಮ್ಮ ತಂಡಕ್ಕೆ ಸಿಗುತ್ತಿರುವ ಪ್ರೀತಿಯನ್ನು ಕಂಡು ಖುಷಿಯಾಗಿರುವ ಬಾಬರ್ ಅಜಂ, ನಾನು ಭಾರತದಲ್ಲಿದ್ದೇನೆ ಎಂದು ಅನಿಸುತ್ತಿಲ್ಲ, ನನ್ನ ಮನೆಯಲ್ಲೇ ಇದ್ದೇನೆ ಎನಿಸುತ್ತದೆ ಎಂದು ಭಾರತದ ಸತ್ಕಾರವನ್ನು ಹೊಗಳಿದ್ದಾರೆ. ಆಟಗಾರರು ಮತ್ತು ಸಿಬ್ಬಂದಿ ತಮ್ಮ ವಾಸ್ತವ್ಯ ಅತ್ಯುತ್ತಮವಾಗಿದ್ದು ತಮಗೆ ಸಂಪೂರ್ಣ ನೆಮ್ಮದಿ ಇದೆ ಎಂದು ಹೇಳಿದ್ದಾರೆ.
ಈ ಬಾರಿ ವಿಶ್ವಕಪ್ನಲ್ಲಿ ಆಡುತ್ತಿರುವ ಪಾಕಿಸ್ತಾನ ತಂಡ ಎಲ್ಲಾ ಆಟಗಾರರಿಗೂ ಇದೇ ಭಾರತದ ಮೊದಲ ಪ್ರವಾಸವಾಗಿದೆ. ಆದರೂ ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ತಮಗೆ ಕಷ್ಟವೇನು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಾರಿ ವಿಶ್ವಕಪ್ನಲ್ಲಿ ಪಾಕಿಸ್ತಾನ ಕೂಡ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ, ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಈ ಬಾರಿ ಪಾಕಿಸ್ತಾನ ಕೂಡ ಸೆಮಿಫೈನಲ್ ತಲುಪುವ ತಂಡವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಬೌಲಿಂಗ್ ದಾಳಿ ಮತ್ತು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಪಾಕಿಸ್ತಾನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಸೆಮಿಫೈನಲ್ ತಲುಪುವ ಸಾಧ್ಯತೆ ಇದೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49 ಓವರ್ ಗಳಲ್ಲಿ 286 ರನ್ಗಳಿಗೆ ಆಲೌಟ್ ಆಗಿದೆ. ನಾಯಕ ಬಾಬರ್ ಅಜಂ ಕೇವಲ 5 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.