ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ಭಾರತದ ಬೌಲಿಂಗ್ ವಿಭಾಗದ ಕ್ಷಲ್ಲಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಯಾವಾಗಲೂ ದುರ್ಬಲವಾಗಿಯೇ ಇತ್ತು ಎಂದಿರುವ ಸಯೀದ್ ಅಜ್ಮಲ್ ಈ ಬಾರಿಯ ವಿಶ್ವಕಪ್ನಲ್ಲಿ ಭಾರತವನ್ನು ಪಾಕಿಸ್ತಾನ ಮಣಿಸಲಿದೆ ಎಂದಿದ್ದಾರೆ.
ಅಂದಹಾಗೆ ಈ ವರ್ಷವೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕನಿಷ್ಠ ಎರಡು ಬಾರಿ ಮುಖಾಮುಖಿಯಾಗಲಿದೆ. ಮೊದಲಿಗೆ ಏಕದಿನ ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದರೆ ಬಳಿಕ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿಯೂ ಈ ಎರಡು ತನಡಗಳ ಕದನ ಕುತೂಹಲ ಮೂಡಿಸಿದೆ. ವಿಶ್ವಕಪ್ನಲ್ಲಿ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಈ ಹೈವೋಲ್ಟೇಜ್ ಕದನಕ್ಕೂ ಮುನ್ನ ಎರಡು ತಂಡಗಳ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ತಂಡಗಳ ಪರವಾಗಿ ಹೇಳಿಕೆಗಳನ್ನು ನೀಡುವುದು ಎದುರಾಳಿ ತಂಡವನ್ನು ಕೆಣಕುವುದು ಸಾಮಾನ್ಯವಾಗಿ ನಡೆಯುತ್ತದೆ. ಆದರೆ ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನದ ಸಯೀದ್ ಅಜ್ಮಲ್ ನೀಡಿರುವ ಈ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕುವಂತೆ ಮಾಡಿದ್ದು ಸಯೀದ್ ಅಜ್ಮಲ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿದ್ದಾರೆ ಭಾರತೀಯ ಅಭಿಮಾನಿಗಳು.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರುವ ಸಯೀದ್ ಅಜ್ಮಲ್ "ಭಾರತದ ಬೌಲಿಂಗ್ ಯಾವಾಗಲೂ ದುರ್ಬಲವಾಗಿಯೇ ಇತ್ತು. ಇತ್ತೀಚೆಗೆ ಸಿರಾಜ್, ಶಮಿ ಉತ್ತಮ ಬೌಲಿಂಗ್ ನಡೆಸುತ್ತಿದ್ದಾರೆ. ಸ್ಪಿನ್ನರ್ಗಳಲ್ಲಿ ರವೀಂದ್ರ ಜಡೇಜಾ ಭಾರತ ತಂಡಕ್ಕೆ ವಿಶ್ವಕಪ್ನಲ್ಲಿ ನಿರ್ಣಾಯಕವಾಗಲಿದ್ದಾರೆ. ಜಸ್ಸಪ್ರೀತ್ ಬೂಮ್ರಾ ಪಾಕಿಸ್ತಾನ ತಂಡಕ್ಕೆ ಭೀತಿಹುಟ್ಟಿಸಬಹುದು. ಆದರೆ ಕಳೆದ ಕೆಲ ಸಮಯಗಳಿಂದೀಚೆಗೆ ಅವರು ಅನ್ಫಿಟ್ ಆಗಿದ್ದಾರೆ. ಹಾಗಾಗಿ ಭಾರತ ಬೌಲಿಂಗ್ ಪಾಕಿಸ್ತಾನಕ್ಕೆ ಘಾಸಿಯುಂಟು ಮಾಡಲಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಸಯೀದ್ ಅಜ್ಮಲ್.
"ಭಾರತದ ಬ್ಯಾಟಿಂಗ್ ಯಾವಾಗಲೂ ಬಲಿಷ್ಠವಾಗಿರುತ್ತದೆ. ನಮ್ಮ ಬೌಲಿಂಗ್ ಅಪಾಯಕಾರಿ. ಇದು ಎರಡು ಸಮಾನವಾದ ಕಾದಾಟವಾಗಿರುತ್ತದೆ. ಈಗಿನ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 60% ಅವಕಾಶವಿದೆ. ಪಾಕಿಸ್ತಾನ ಹೊಂದಿರುವ ಬೌಲರ್ಗಳನ್ನು ನೋಡಿದರೆ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರೆ ಪಾಕಿಸ್ತಾನ ಖಂಡಿತಾ ಗೆಲ್ಲಲಿದೆ" ಎಂದಿದ್ದಾರೆ ಪಾಕಿಸ್ತಾನ ತಂಡದ ಮಾಜಿ ಆಟಗಾರ.
ಇನ್ನು ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಕಳೆದ ಸಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡು ಪಂದ್ಯಗಳಲ್ಲಿ ಭಾಗಿಯಾದ ಬಳಿಕ ಬೆನ್ನುನೋವಿನ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಕಳೆದ ಮಾರ್ಚ್ನಲ್ಲಿ ಬೂಮ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಪ್ರಸ್ತುತ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿ ಭಾಗಿಯಾಗಿರುವ ಬೂಮ್ರಾ ಮುಂದಿನ ಏಷ್ಯಾ ಕಪ್ ಟೂರ್ನಿಯ ವೇಳೆಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಇನ್ನು ಟೀಮ್ ಇಂಡಿಯಾ ಏಕದಿನ ತಂಡದ ಮತ್ತಿಬ್ಬರು ಪ್ರಮುಖ ಸದಸ್ಯರಾದ ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಕೂಡ ಗಾಯಗೊಂಡಿದ್ದು ತಂಡದಿಂದ ಹೊರಗುಳಿದಿದ್ದಾರೆ. ಕೆಎಲ್ ರಾಹುಲ್ ಚೇತರಿಕೆಯ ಹಾದಿಯಲ್ಲಿದ್ದು ಏಷ್ಯಕಪ್ಗೆ ಸಂಪೂರ್ಣವಾಗಿ ಸಿದ್ದವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.