
ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ರೋಚಕ ಸೋಲನ್ನು ಅನುಭವಿಸಿದ ನಂತರ ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್, ಬಾಬರ್ ಅಜಮ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 159 ರನ್ ಗಳಿಸಿತು. 160 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾವನ್ನು ಪಾಕಿಸ್ತಾನ ಆರಂಭದಲ್ಲೇ ಕಟ್ಟಿಹಾಕಿತು. 31 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಪಡೆದು ಭಾರತದ ಮೇಲೆ ಒತ್ತಡ ಹೇರಿತು. ಆದರೆ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟ ಆಡುವ ಮೂಲಕ ಭಾರತವನ್ನು ಗೆಲುವಿನ ಸನಿಹಕ್ಕೆ ತಂದರು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದರು.
ಈ ಸಮಯದಲ್ಲಿ ಬಾಬರ್ ಅಜಂ ಮಾಡಿದ ತಪ್ಪುಗಳೇ ಪಾಕಿಸ್ತಾನದ ಸೋಲಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಬಾಬರ್ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ. ಮಾತ್ರವಲ್ಲದೆ ಸ್ಟಾರ್ ಬ್ಯಾಟರ್ ಬಾಬರ್ ಅಜಂ ತಮ್ಮ ನಾಯಕತ್ವವನ್ನು ತೊರೆಯಬೇಕು ಎಂದು ಹೇಳಿದರು.

ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕು
ಇಂತಹ ಒತ್ತಡದ ಸಂದರ್ಭಗಳಲ್ಲಿ ಹಿರಿಯ ಆಟಗಾರರು ದೊಡ್ಡ ಪಾತ್ರವನ್ನು ವಹಿಸುತ್ತಾರೆ. ನಾಯಕ ಗೊಂದಲಕ್ಕೊಳಗಾಗಿದ್ದರೆ ಅಥವಾ ಆ ಸಮಯದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೆ, ಹಿರಿಯ ಆಟಗಾರನು ಮಾರ್ಗದರ್ಶನ ನೀಡಬಹುದು. ಅದಕ್ಕಾಗಿಯೇ ನಾನು ಯಾವಾಗಲೂ ಹಿರಿಯ ಆಟಗಾರ ಯಾವಾಗಲೂ ವೇಗದ ಬೌಲರ್ಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳುತ್ತೇನೆ ಎಂದಿದ್ದಾರೆ.
ಇಷ್ಟು ವರ್ಷಗಳ ಕ್ರಿಕೆಟ್ ನಂತರವೂ ತಂಡವನ್ನು ಮುನ್ನಡೆಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ನಾಯಕತ್ವವನ್ನು ತೊರೆಯಬೇಕು. ನೀವು ಮತ್ತೆ ಅದೇ ತಪ್ಪುಗಳನ್ನು ಮಾಡಿದರೆ ಎದುರಾಳಿಗಳಿಗೆ ಲಾಭ, ನೀವು ನಾಯಕತ್ವವನ್ನು ತೊರೆಯಬೇಕು. ಇದೇ ರೀತಿ ಬಹಳಷ್ಟು ಆಟಗಾರರು ನಾಯಕತ್ವ ತೊರೆದಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.
ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇದೇ ಬಾಬರ್ ಅಜಂ ನೇತೃತ್ವದಲ್ಲಿತೇ ಪಾಕಿಸ್ತಾನ ಭಾರತದ ವಿರುದ್ಧ ತಮ್ಮ ಮೊದಲನೇ ಗೆಲುವು ಸಾಧಿಸಿತ್ತು. 10 ವಿಕೆಟ್ಗಳ ಜಯ ಸಾಧಿಸಿದ್ದ ಪಾಕಿಸ್ತಾನ ಟಿ20 ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಸಾಧಿಸಿದ ಮೊದಲನೇ ಗೆಲುವು ಅದಾಗಿತ್ತು. ಏಷ್ಯಾಕಪ್ನಲ್ಲಿ ಕೂಡ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು.