ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸುತ್ತವೆಯೋ ಇಲ್ಲವೋ ಎಂಬ ಬಗ್ಗೆ ಕೊನೆಗೂ ಸ್ಪಷ್ಟತೆ ಸಿಕ್ಕಿದೆ. ಪಾಕಿಸ್ತಾನ ಸರ್ಕಾರ ತಮ್ಮ ತಂಡ ಈಗಾಗಲೇ ನಿಗದಿಯಾಗಿರುವಂತೆ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ವಿರುದ್ಧ ಫೆಬ್ರವರಿ 15 ರಂದು ಕೊಲಂಬೊದಲ್ಲಿ ಕಾದಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದೆ.
ಸೋಮವಾರ (ಫೆಬ್ರವರಿ 10) ತಡರಾತ್ರಿ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯವನ್ನು ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಈ ಮೊದಲೇ ನಿಗದಿಯಾದಂತೆ ಉಭಯ ತಂಡಗಳು ಕೊಲಂಬೊದಲ್ಲಿ ಕಾದಾಟವನ್ನು ನಡೆಸಲಿವೆ.

ಸೋಮವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಲಾಹೋರ್ದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧಿಕಾರಿಗಳ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ವಿವರಿಸಿದರು. ಇದೇ ವೇಳೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮೀನುಲ್ ಇಸ್ಲಾಂ ಸಹ ಹಾಜರಿದ್ದರು. ತಡ ರಾತ್ರಿ ನಡೆದ ಸಭೆಯಲ್ಲಿ ಬೆಳಗ್ಗೆಯಿಂದ ನಡೆದ ಸಭೆಗಳ ತೀರ್ಮಾನವನ್ನು ತಿಳಿಸಲಾಯಿತು. ಆ ಬಳಿಕವೇ ಪಾಕ್ ಸರ್ಕಾರ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳು ನಡೆಯುವ ಬಗ್ಗೆ ಪಾಕ್ ಸರ್ಕಾರ ಸ್ಪಷ್ಟತೆ ನೀಡಿದೆ. ಅಲ್ಲದೆ ತನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದೆ. ಸೋಮವಾರ ಐಸಿಸಿ, ಪಿಸಿಬಿ ಹಾಗೂ ಬಿಸಿಬಿ ಅಧಿಕಾರಿಗಳ ನಡುವೆ ನಡೆದ ಸಭೆಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದೆ. ಅಲ್ಲದೆ ಸಭೆಯಲ್ಲಿ ವಿಷಯಗಳನ್ನು ತಿಳಿದ ಬಳಿಕ ಸರ್ಕಾರ ಪಾಕಿಸ್ತಾನ ತಂಡಕ್ಕೆ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಆಡಲು ಅನುಮತಿ ನೀಡಲಾಗಿದೆ.
ಟಿ20 ವಿಶ್ವಕಪ್ ಆರಂಭವಾಗುವ ಮುನ್ನ ಪಾಕಿಸ್ತಾನ ಪ್ರಧಾನಿ ಕ್ಯಾಬಿನೆಟ್ ಸಭೆಯಲ್ಲಿ ಭಾರತದ ವಿರುದ್ಧ ಪಾಕ್ ಕಣಕ್ಕೆ ಇಳಿಯುತ್ತಿಲ್ಲ ಎಂದು ತಿಳಿಸಿದ್ದರು. ಅಲ್ಲಿಂದ ಈ ಬಗ್ಗೆ ಚರ್ಚೆಗಳು ಆರಂಭವಾದವು. ಬಳಿಕ ಐಸಿಸಿ ಸಹ ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯಗಳನ್ನು ಆಡದೇ ಇದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿತ್ತು. ಇದರಿಂದ ಪಿಸಿಬಿ ಫೋರ್ಸ್ ಮೇಜರ್ ಮೊರೆ ಹೋಗಲು ನಿರ್ಧರಿಸಿತ್ತು. ಈ ಮೂಲಕ ಪಿಸಿಬಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರ ತಮ್ಮದಲ್ಲ ಎಂದು ಸ್ಪಷ್ಟ ಪಡಿಸಿತ್ತು.
ಭದ್ರತಾ ಕಾರಣಗಳಿಂದಾಗಿ ಭಾರತದಲ್ಲಿ ಪಂದ್ಯಗಳನ್ನು ಆಡುವುದಿಲ್ಲ ಎಂದು ಬಾಂಗ್ಲಾದೇಶ ಸ್ಪಷ್ಟಪಡಿಸಿತ್ತು. ಅಲ್ಲದೆ ಬಿಸಿಬಿ ತನ್ನ ಗುಂಪು ಹಾಗೂ ಸ್ಥಳಗಳನ್ನು ಬದಲಿಸುವಂತೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಐಸಿಸಿ ಮನ್ನಣೆ ನೀಡಿರಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟು ಐಸಿಸಿ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶವನ್ನು ನೀಡಿತು. ಇದಾದ ಬಳಿಕ ಪಾಕಿಸ್ತಾನ ಬಾಂಗ್ಲಾದೇಶದ ಬೆಂಬಲವಾಗಿ ಭಾರತ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ತಿಳಿಸಿತ್ತು.